ಗೊಂದಲದ ಗೂಡಾದ ಹೊಸನಗರ ಕೊಡಚಾದ್ರಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ !

0 3,438

ಹೊಸನಗರ: ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾಲೂಕಿನ ಮಾರುತಿಪುರದಲ್ಲಿ ಹಮ್ಮಿಕೊಂಡಿರುವ ಎಸ್‌ಎಸ್‌ಎಸ್ ಶಿಬಿರ ಗೊಂದಲದ ಗೂಡಾಗಿದೆ.

ಹೌದು, ಜ.12ರಿಂದ ಆರಂಭಗೊಂಡು ಜ.18ರ ವರೆಗೆ ನಡೆಯಲಿರುವ ಶಿಬಿರದ ಕೆಲ ಅವ್ಯವಸ್ಥೆಗಳು ಈಗ ಚರ್ಚೆಗೆ ಒಳಗಾಗಿದೆ.

ಸ್ಥಳೀಯರ ಸಂಪರ್ಕವಿಲ್ಲ:
ರಾಷ್ಟ್ರೀಯ ಸೇವಾ ಯೋಜನೆಯ ಮೂಲತತ್ವವೇ ಸಮುದಾಯ ಮೊದಲು ವೈಯಕ್ತಿಕ ಬಳಿಕ ಎನ್ನುವ ಧ್ಯೇಯದೊಂದಿಗೆ ಕೆಲಸ ನಿರ್ವಹಿಸುವುದು. ಆದರೆ ಈ ಬಾರಿ ಕಾಲೇಜು ಹಮ್ಮಿಕೊಂಡಿರುವ ಶಿಬಿರದಲ್ಲಿ ಸ್ಥಳೀಯ ಗಣ್ಯರಿಗೆ ಕಾರ‍್ಯಕ್ರಮದಲ್ಲಿ ಮಾನ್ಯತೆ ನೀಡಲಾಗಿಲ್ಲ. ಉಪನ್ಯಾಸ, ಗೋಷ್ಠಿಗಳಿಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ. ಸ್ಥಳೀಯ ಹಳೆಯ ವಿದ್ಯಾರ್ಥಿಗಳು, ನಂತರ ಕಾಲೇಜು ಶಿಬಿರದಲ್ಲಿ ಭಾಗವಹಿಸಿದ ಹಿರಿಯ ಶಿಬಿರಾರ್ಥಿಗಳನ್ನು ಸಹ ಕಡೆಗಣಿಸಿರುವುದು ಅಸಮಧಾನ ತಂದಿದೆ. ಆಹ್ವಾನ ಪತ್ರಿಕೆಯ ತುಂಬ ಕಾಲೇಜು ಸಮಿತಿ ಸದಸ್ಯರು, ಉಪನ್ಯಾಸಕರು ಹಾಗೂ ಮಾರುತಿಪುರ ಗ್ರಾಮ ಪಂಚಾಯಿತಿ ಸದಸ್ಯರ ಹೆಸರೇ ರಾರಾಜಿಸುತ್ತಿವೆ. ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುವ ಕೆಲ ನೇರ ನಿಷ್ಠುರ ನುಡಿಯಿಂದಾಗಿ ಉಪನ್ಯಾಸಕರ ಹೆಸರನ್ನು ಕೈಬಿಡಲಾಗಿದೆ. ಅತಿಥಿ ಉಪನ್ಯಾಸಕರನ್ನು ಸಹಾ ಉಪನ್ಯಾಸಕರು ಎಂದೇ ಪ್ರಕಟಿಸಿ ನಿಯಮ ಉಲ್ಲಂಘಿಸಲಾಗಿದೆ. ಉದ್ಘಾಟನಾ ಕಾರ‍್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಹೆಸರನ್ನೇ ಬಿಟ್ಟು ಶಿಷ್ಠಾಚಾರ ಉಲ್ಲಂಘಿಸಲಾಗಿದೆ.

ಒಂದೇ ಕಟ್ಟಡದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು !
ಮಾರುತಿಪುರದ ಪ್ರೌಢಶಾಲೆಯ ಒಂದೇ ಕಟ್ಟಡದಲ್ಲಿ ಪುರುಷ ಹಾಗೂ ಮಹಿಳಾ ಶಿಬಿರಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯಗಳ ಬಳಕೆಗೆ ವಿದ್ಯಾರ್ಥಿನಿಯರಿಗೆ ಸಮಸ್ಯೆಯಿದ್ದು, ಸುರಕ್ಷತೆಯ ಆತಂಕ ವಿದ್ಯಾರ್ಥಿನಿಯರ ಪೋಷಕರಿಗೆ ಎದುರಾಗಿದೆ. ಸಮೀಪದಲ್ಲಿಯೇ ಪ್ರಾಥಮಿಕ ಶಾಲೆಯ ಕಟ್ಟಡ ಇದ್ದರೂ, ಅದನ್ನು ಬಳಸಿಕೊಳ್ಳಲು ಮುಂದಾಗಿರುವುದು ವಿಪರ‍್ಯಾಸ. ಅಲ್ಲದೇ ಮೊದಲೆರಡು ದಿನ ಇದ್ದ ಶಿಬಿರದ ಮಹಿಳಾ ಕಾರ‍್ಯಕ್ರಮಾಧಿಕಾರಿ ಬಳಿಕ ಶಿಬಿರದಲ್ಲಿ ಇಲ್ಲದೇ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಾರೆ.

ಶಿಬಿರಾರ್ಥಿಗಳ ಸಂಖ್ಯೆಯೂ ಕಡಿಮೆ
ಕಳೆದ ವರ್ಷ ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿದ್ದ ಶಿಬಿರ ಯಶಸ್ವಿಯಾಗಿ ಜನಮನ್ನಣೆಗೆ ಪಾತ್ರವಾಗಿತ್ತು. ಆದರೆ ಈ ಬಾರಿ ಕೇವಲ 70 ವಿದ್ಯಾರ್ಥಿಗಳಷ್ಟೇ ಶಿಬಿರದಲ್ಲಿ ಪಾಲ್ಗೊಳ್ಳುವ ಉತ್ಸಾಹ ತೋರಿದ್ದಾರೆ. ಯೋಜನೆಯಲ್ಲಿ ಪಾಲ್ಗೊಳ್ಳುವಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವಲ್ಲಿ ಕಾರ‍್ಯಕ್ರಮಾಧಿಕಾರಿಗಳು ವಿಫಲರಾಗಿರುವುದು ಕಂಡುಬರುತ್ತಿದೆ.

ಮಾಧ್ಯಮದವರಿಗೂ ಆಹ್ವಾನವಿಲ್ಲ
ವಿಶೇಷ ಉಪನ್ಯಾಸಕರುಗಳು ಶಿಬಿರದ ಯೋಜನೆ ಶಾಲೆಯಲ್ಲಿ ಹಮ್ಮಿಕೊಂಡಿದ್ದರೂ, ಪೂರ್ವಭಾವಿ ಸಭೆ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಆಯೋಜಿಸಲಾಗಿತ್ತು. ಶಾಲಾ ಸಮಿತಿಯ ಪ್ರಮುಖರಿಗೇ ಸಭೆಯ ಮಾಹಿತಿ ನೀಡಿಲ್ಲ. ಆರೋಗ್ಯ ತಪಾಸಣಾ ಶಿಬಿರ, ಭಾಗವಾಗಿದ್ದು, ವ್ಯಾಪಕ ಪ್ರಚಾರವಿಲ್ಲದೇ ಕಾರ‍್ಯಕ್ರಮಗಳು ಕಳೆಗುಂದಿವೆ. ಮಾಧ್ಯಮದವರಿಗೆ ಸಹಾ ಸೌಜನ್ಯಕ್ಕೂ ಆಹ್ವಾನ ನೀಡಲಾಗಿಲ್ಲ.

ಮಕ್ಕಳ ಅಧ್ಯಯನಕ್ಕೆ ಅಡ್ಡಿ
ಪ್ರೌಢಶಾಲೆಯಲ್ಲಿ ಶಿಬಿರ ಆಯೋಜಿಸಿದ್ದು, ವಸತಿ ಯೋಜನೆಗಾಗಿ ಒಂದು ತರಗತಿಯನ್ನು ಹೊಸ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಅಲ್ಲದೇ ಪಕ್ಕದ ಕಟ್ಟಡದಲ್ಲಿಯೇ ಎಸ್‌ಎಸ್‌ಎಲ್‌ಸಿ ತರಗತಿ ಪಾಠ ಪ್ರವಚನಗಳು ನಡೆಯುತ್ತಿದ್ದು, ಸದ್ಯದಲ್ಲೇ ಪೂರ್ವಭಾವಿ ಪರೀಕ್ಷೆಗಳು ನಡೆಯುತ್ತಿವೆ. ಶಿಬಿರವನ್ನು ಅಲ್ಲಿಯೇ ಆಯೋಜಿಸಿರುವುದು ಅಧ್ಯಯನಕ್ಕೆ ತೊಡಕಾಗುವ ಆತಂಕ ಮಕ್ಕಳ ಪೋಷಕರನ್ನು ಕಾಡಿದೆ.

ವಿದ್ಯಾರ್ಥಿಗಳಿಗೆ ನಾಗರಿಕ ಸಮಾಜದ ಜವಾಬ್ದಾರಿಗಳನ್ನು ನಿಭಾಯಿಸಬೇಕಾದ ಅನುಭವ ಪಡೆಯುವ ಉದ್ದೇಶದೊಂದಿಗೆ ನಡೆಯುವ ನಡೆಯಬೇಕಾದ ಎನ್‌ಎಸ್‌ಎಸ್ ಶಿಬಿರಗಳು ಜನಮಾನಸಕ್ಕೆ ಯಾವ ಸಂದೇಶ ನೀಡುತ್ತಿವೆ ಎಂಬ ಆತ್ಮಾವಲೋಕನ ಕಾಲೇಜು ಆಡಳಿತ ಮಾಡಿಕೊಳ್ಳಬೇಕಿದೆ.

ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ಗ್ರಾಮದ ಜನತೆಯ ಸಹಕಾರ ಸಹಯೋಗವಿಲ್ಲದೇ ಶಿಬಿರ ನಡೆಸುತ್ತಿರುವುದು ಸಮಂಜಸವಲ್ಲ. ಇಂತಹ ಶಿಬಿರಗಳಿಂದ ಗುಣಾತ್ಮಕ ಫಲಿತಾಂಶ ಹೊರಬರಬೇಕು. ಕೇವಲ ಕಾಟಾಚಾರದ ಶಿಬಿರ ಮಾಡಿ ಅನುದಾನ ಪೋಲು ಮಾಡುವಂತಾಗಬಾರದು ಎನ್ನುವ ಅಭಿಪ್ರಾಯ ಸ್ಥಳೀಯವಾಗಿ ಕೇಳಿಬಂದಿದೆ.

ಯಾವುದೇ ಕಾರ‍್ಯಕ್ರಮಗಳಿಗೆ ಸಮೀಪದ ಗ್ರಾಮಸ್ಥರಿಗೆ, ಹಳೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿಲ್ಲ. ಶ್ರಮದಾನ, ಸಮುದಾಯ ಅಭಿವೃದ್ಧಿಗಾಗಿ ನಡೆಯಬೇಕಾದ ಕರ‍್ಯಕ್ರಮಗಳು ಕೇವಲ ನಾಮಕಾವಸ್ತೆಗೆ ನಡೆದಿದ್ದು, ವಿದ್ಯಾರ್ಥಿಗಳು ಪಿಕ್‌ನಿಕ್ ಬಂದಂತಾಗಿದೆ. ರಾತ್ರಿ ನಡೆಯುವ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಡುವೆ ಅಂತರವಿಲ್ಲದಂತೆ ಕುಳಿತು ಅಶಿಸ್ತು ಮೆರೆದಿದ್ದಾರೆ. ಉಪನ್ಯಾಸಕರ ಎದುರೇ ಇಂತಹ ಘಟನೆಗಳು ನಡೆದರೂ ಶಿಬಿರಾರ್ಥಿಗಳಿಗೆ ಬುದ್ದಿ ಹೇಳುವ ಕಾರ‍್ಯ ನಡೆದಿಲ್ಲ. ಹೆಣ್ಣು ಮಕ್ಕಳ ಪೋಷಕರಿಗೆ ಇದು ಯಾವ ಸಂದೇಶ ನೀಡುತ್ತಿವೆ ಎನ್ನುವುದನ್ನು ಕಾಲೇಜು ಆಡಳಿತ ಸ್ಪಷ್ಟ ಪಡಿಸಬೇಕಿದೆ. ಹತ್ತಾರು ಅವ್ಯವಸ್ಥೆಗಳಿಂದ ಕೂಡಿದ ಈ ಶಿಬಿರದ ಶಿಬಿರಾಧಿಕಾರಿಗಳ ವಿರುದ್ಧ ವಿಶ್ವವಿದ್ಯಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳಾ ಶಿಬಿರಾಧಿಕಾರಿಗಳು ಯಾಕೆ ಶಿಬಿರ ಬಿಟ್ಟು ತೆರಳಿದ್ದಾರೆ ಎಂದು ಸ್ಪಷ್ಟಪಡಿಸಲಿ.
– ಗಣೇಶ ಸೋಗೋಡು, ಆಮ್‌ಆದ್ಮಿ ಯುವ ಘಟಕದ ಜಿಲ್ಲಾಧ್ಯಕ್ಷ

Leave A Reply

Your email address will not be published.

error: Content is protected !!