ಪಂಚಾಯಿತಿ ಮಟ್ಟದ ಪ್ರಚಾರ ಸಭೆ | ಗ್ಯಾರಂಟಿ ಯೋಜನೆಗಳ ಬಗ್ಗೆ ತಪ್ಪು ಸಂದೇಶ ; ಗೀತಾ ಶಿವರಾಜ್‌ಕುಮಾರ್

0 660

ಸಾಗರ : ಗ್ಯಾರಂಟಿ ಯೋಜನೆಗಳಿಂದ ಜನರು ದಾರಿ ತಪ್ಪುತ್ತಿದ್ದಾರೆ ಎಂದು ಕೆಲವರು ತಪ್ಪು ಸಂದೇಶ ಹರಡುತ್ತಿದ್ದಾರೆ. ಈ ರೀತಿಯ ವದಾಂತಿಗಳಿಗೆ ಜನರು ಕಿವಿಕೊಡಕೂಡದು. ಗ್ಯಾರಂಟಿ ಯೋಜನೆಗಳಿಂದ ಬಡವರ ಬಾಳು ಹಸನಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹೇಳಿದರು.

ಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಪಡವಗೋಡು ಗ್ರಾಮ ಪಂಚಾಯಿತಿ ಲಿಂಗದಹಳ್ಳಿ ಹಾಗೂ ಭೀಮನೇರಿಯ ಸೂರನಗದ್ದೆ ದೇವಸ್ಥಾನ ವೃತ್ತದಲ್ಲಿ ಬುಧವಾರ ಆಯೋಜಿದ್ದ ಗ್ರಾಮ ಪಂಚಾಯಿತಿ ಮಟ್ಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಕೃಪಾಂಕ ಕಲ್ಪಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಶಕ್ತ ಕುಟುಂಬಗಳಿಗೆ ಆಶಾಕಿರಣ ಆಗಿದ್ದರು. ಅವರ ಮಗಳಾದ ನಾನು ಕೂಡ ಬಂಗಾರಪ್ಪ ಅವರ ಹಾದಿಯಲ್ಲಿ ಸಾಗುತ್ತೇನೆ‌. ನೊಂದವರ ಕಣ್ಣೀರು ಒರೆಸುತ್ತೇನೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾವು ಹೆಚ್ಚಾಗಿದೆ. ಆದ್ದರಿಂದ, ಇಲ್ಲಿ ಗೀತಾ ಶಿವರಾಜಕುಮಾರ್ ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು. ಗೀತಾ ಶಿವರಾಜಕುಮಾರ್ ಅವರು ರಾಜಕೀಯಕ್ಕೆ ಬರಲು ಹಕ್ಕಿದೆ. ಅವರ ರಕ್ತದಲ್ಲಿಯೇ ಸಾಮಾಜಿಕ ಸೇವೆಯ ಗುಣವಿದೆ. ಆದರೆ, ಈ ಬಗ್ಗೆ ಕೆಲವರು ಟೀಕಿಸುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಮತ ನೀಡಿ ಹರಿಸಬೇಕು ಎಂದು ಕೋರಿದರು.

ಸಂಸದ ಬಿ.ವೈ. ರಾಘವೇಂದ್ರ ಅವರು ಗ್ರಾಮೀಣ ಮಟ್ಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಸೋಗಾನೆ ವಿಮಾನ ನಿಲ್ದಾಣ, ಸೇತುವೆ, ರಸ್ತೆ ಮಾಡಿದರೆ ಮಾತ್ರ ಅಭಿವೃದ್ಧಿ ಅಲ್ಲ. ಬಡ ಜನರ ಅಳಲು ಆಲಿಸಬೇಕು. ಈ ಕಾರ್ಯವನ್ನು ಗೀತಾ ಅವರು ಪ್ರಮಾಣಿಕವಾಗಿ ಮಾಡಲಿದ್ದಾರೆ ಎಂದರು.

ನಟ ಶಿವರಾಜ್‌ಕುಮಾರ್ ಮಾತನಾಡಿ, ಆರೋಗ್ಯ ಸಮಸ್ಯೆ ನಡುವೆಯೂ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಇದಕ್ಕೆ ಕಾರಣ ಶಿವಮೊಗ್ಗ ಜನರು ಗೀತಾ ಅವರ (ಪತ್ನಿ) ಮೇಲಿಟ್ಟಿರುವ ನಂಬಿಕೆ. ಆದ್ದರಿಂದ, ನಾನು ಗೀತಾ ಅವರನ್ನು ನಂಬಿದ್ದೇನೆ. ಮತ ನೀಡಿ ಎಂದು ಮನೆ ಬಾಗಿಲಿಗೆ ಬಂದಿದ್ದೇವೆ. ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರು ಜಿಲ್ಲೆಯಲ್ಲಿ ಕಣ್ಮರೆ ಆಗಿದ್ದಾರೆ ಎಂದು ಕೆಲವರು ವದಾಂತಿ ಹಬ್ಬಿಸುತ್ತಿದ್ದಾರೆ. ಆದರೆ, ಈ ರೀತಿ ಮಾಡುವುದು ತಪ್ಪು. ಚುನಾವಣೆ ಪ್ರಚಾರ ಎಂದಾಕ್ಷಣಾ ಪೋಟೊ, ವಿಡಿಯೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಲ್ಲ. ಜನರ ಅಳಲು ಆಲಿಸಬೇಕು. ಈ ಕಾರ್ಯವನ್ನು ನಾನು ಮಾಡುತ್ತಿದ್ದೇನೆ.
– ಗೀತಾ ಶಿವರಾಜಕುಮಾರ್, ಕಾಂಗ್ರೆಸ್ ಅಭ್ಯರ್ಥಿ

ಸಾಗರ ತಾಲ್ಲೂಕಿನಲ್ಲಿ ಮಾಜಿ ಶಾಸಕ ಹರತಾಳು ಹಾಲಪ್ಪ ಆಡಳಿತದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯ. ಸಾಗರದಲ್ಲಿ ಮದ್ಯದಂಗಡಿ ತೆರೆದಿರುವುದ ಬಿಟ್ಟರೆ, ಬೇರೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಬೇಕಿರುವುದು ಕಣ್ಣೀರು ಒರೆಸುವ ಕೈಗಳು. ಅದೇ ಕಾರಣಕ್ಕೆ ಹಾಲಪ್ಪ ಮನೆ ಸೇರಿದ್ದಾರೆ. ಆದ್ದರಿಂದ, ಇಲ್ಲಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಬೆಂಬಲಿಸಬೇಕು.
– ಬೇಳೂರು ಗೋಪಾಲಕೃಷ್ಣ, ಶಾಸಕ

ಕೆಪಿಸಿಸಿ ಉಪಾಧ್ಯಕ್ಷ ಅನಿಲ್ ಕುಮಾರ್ ತಡಕಲ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಕಲಗೋಡು ರತ್ನಾಕರ್, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮೋಹನ್, ಅನಿತಾ ಕುಮಾರಿ, ಸೂರನಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಅಣ್ಣಪ್ಪ ಇದ್ದರು.

Leave A Reply

Your email address will not be published.

error: Content is protected !!