ಬಂಗಾರಪ್ಪನವರಿಂದಲೇ ರಾಜ್ಯದಲ್ಲಿ ಬಿಜೆಪಿ ಜೀವ ಪಡೆದಿದ್ದು ; ಸಚಿವ ಮಧು ಬಂಗಾರಪ್ಪ

0 291

ಶಿವಮೊಗ್ಗ: ಬಿ.ವೈ. ರಾಘವೇಂದ್ರ ಅವರಿಗೆ ಈ ಬಾರಿ ಸೋಲಿನ ರುಚಿಯನ್ನು ತೋರಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಘವೇಂದ್ರ ಸುಳ್ಳು ಹೇಳುವುದನ್ನು ಮುಂದುವರೆಸುತ್ತಲೇ ಇದ್ದಾರೆ. ಬಂಗಾರಪ್ಪ ಅವರು ಬಿಜೆಪಿಯಿಂದ ಗೆದ್ದಿದ್ದು ಎಂದು ಪದೇ ಪದೇ ಹೇಳುತ್ತಾರೆ. ಮಾನ ಮರ್ಯಾದೆ ಅವರಿಗೆ ಇಲ್ಲ. ಬಂಗಾರಪ್ಪ ಹೆಸರು ಹೇಳಲು ಅವರಿಗೆ ಯೋಗ್ಯತೆಯೂ ಇಲ್ಲ. ಬಂಗಾರಪ್ಪನವರಿಂದಲೇ ರಾಜ್ಯದಲ್ಲಿ ಬಿಜೆಪಿ ಜೀವ ಪಡೆದಿದ್ದು. ಶಕ್ತಿ ಬಂದಿದ್ದು. ಒಮ್ಮೆ ಸೋತರೂ ಎಂದ‌ ಕಾರಣಕ್ಕೆ ಸೋಲಿನ ಬಗ್ಗೆ ಇಷ್ಟು ಕೀಳು ಮಟ್ಟದಲ್ಲಿ ಅವರು‌ ಮಾತನಾಡಬಾರದು. ಅವರಿಗೆ ಸೋಲಿನ ರುಚಿಯನ್ನು ಈ ಬಾರಿ ತೋರಿಸುತ್ತೇವೆ ಎಂದರು.

ರಾಘವೇಂದ್ರ ರಾಜಕಾರಣಕ್ಕೆ ಬರುವ ಮೊದಲೇ ನಾನು ಬಂದಿದ್ದು. ಬಿ.ಎಸ್. ಯಡಿಯೂರಪ್ಪನವರ ಪರ ನಾನೇ ಪ್ರಚಾರ ಮಾಡಿ ಅವರ ಗೆಲುವಿಗೆ ಕಾರಣವಾಗಿದ್ದು. ಇದು ರಾಘವೇಂದ್ರ ಅವರಿಗೆ ಗೊತ್ತಿರಲಿ. ನಮ್ಮ ತಂದೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರಿಗೆ ಪುನರ್ಜನ್ಮ ನೀಡಿದ್ದು. ನಮ್ಮ ಋಣದಲ್ಲಿ ಯಡಿಯೂರಪ್ಪ ಕುಟುಂಬವಿದೆ ಎಂದು ಕುಟುಕಿದರು.

ರಾಮನನ್ನು ಬೀದಿಗೆ ತಂದು ಈಗ ಓಡಿ ಹೋಗಿ ಅಯೋಧ್ಯೆಯಲ್ಲಿ ಬೀಗ ಹಾಕಿಕೊಂಡಿದ್ದಾರೆ. ಪಕ್ಷ ಕಟ್ಟಿದವರನ್ನು ತಮ್ಮ ಸ್ವಾರ್ಥಕ್ಕಾಗಿ ತುಳಿಯುತ್ತಿದ್ದಾರೆ. ಅವರು ನಮ್ಮ ಕುಟುಂಬಕ್ಕೆ ಉತ್ತರ ಕೊಡಬೇಕಾಗಿಲ್ಲ. ಅವರದೇ ಪಕ್ಷದ ಈಶ್ವರಪ್ಪನವರಿಗೆ ಮೊದಲು ಉತ್ತರ ಕೊಡಲಿ ಎಂದರು.

ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ತಂದಿದ್ದು ನಾನು. ಎಂಪಿಎಂ ಅನ್ನು ಮತ್ತೆ ಪುನಶ್ಚೇತನ ಮಾಡೇ ಮಾಡುತ್ತೇವೆ. ನಮ್ಮ ಗ್ಯಾರಂಟಿಗಳು ಯಶಸ್ವಿಯಾಗಿವೆ. ನಮ್ಮ ತಂದೆ ಬಂಗಾರಪ್ಪನವರ ಕೊಡುಗೆ ಸಾಕಷ್ಟಿದೆ. ಬರಗಾಲದಲ್ಲಿ ಕೇಂದ್ರದಿಂದ ಹಣ ತರುವ ಯೋಗ್ಯತೆ ಇಲ್ಲದವರಿಗೆ ಮತ ಏಕೆ ಹಾಕಬೇಕು? ಸ್ವಾರ್ಥ ರಾಜಕಾರಣಕ್ಕಾಗಿ ಜಿಲ್ಲಾ ಆಸ್ಪತ್ರೆಯನ್ನೇ ಶಿಕಾರಿಪುರಕ್ಕೆ‌ ಸ್ಥಳಾಂತರಿಸಿದವರೇ ಇವರು. ಇವರಿಂದ ಅಭಿವೃದ್ಧಿ ಪಾಠ ಕಲಿಯಬೇಕಾಗಿಲ್ಲ ಎಂದರು.

ಭ್ರಷ್ಟಾಚಾರದ ಹಣದಲ್ಲಿ ಬಿಜೆಪಿಯವರು ಚುನಾವಣೆ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಲು ಇವರಿಗೆ ಏನು ಹಕ್ಕಿದೆ? ಅವರ ಇಡೀ ಕುಟುಂಬ ದೇಶಕ್ಕಾಗಿ ಪ್ರಾಣ ತೆತ್ತಿದೆ. ಭ್ರಷ್ಟಾಚಾರಿಗಳನ್ನು ರಕ್ಷಿಸುವ ಕೆಲಸವನ್ನು ಬಿಜೆಪಿಯವರು ವಾಷಿಂಗ್ ಮಷಿನ್ ತರ
ಉಪಯೋಗಿಸುತ್ತಿದ್ದಾರೆ. ಈಗ ಬಿಜೆಪಿವರಿಗೆ ಒಂದು ಪೌಡರ್ ಸಿಕ್ಕಿದೆ ಎಂದರು.

ನಾಮಪತ್ರ ಸಲ್ಲಿಕೆಗೆ ಸಾವಿರಾರು ಜನ ಬಂದು ಗೀತಕ್ಕರನ್ನು ಆಶೀರ್ವದಿಸಿದ್ದಾರೆ. ಹೆಣ್ಣುಮಕ್ಕಳೇ ಹೆಚ್ಚಾಗಿದ್ದರು. ನಮ್ಮ ನಿರೀಕ್ಷೆ ಮೀರಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದು ನಮಗೆ ಹರ್ಷ ತಂದಿದೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ಪ್ರಚಾರ ಮತ್ತಷ್ಟು ಹೆಚ್ಚಾಗಲಿದೆ. ನಮ್ಮ ಗೆಲುವು ಖಚಿತ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ಗಿರೀಶ್ ಹೆಚ್.ಪಿ., ರವಿಕುಮಾರ್ ಇದ್ದರು.

Leave A Reply

Your email address will not be published.

error: Content is protected !!