ಪತ್ನಿಯೊಂದಿಗೆ ಮಾತಾಡಿದ ಯುವಕನ ಮೇಲೆ ಅಟ್ಯಾಕ್, ಬೆರಳು ಕಟ್ !
ಸಾಗರ: ‘ನನ್ನ ಹೆಂಡ್ತಿ ಜತೆ ನಿಂಗೇನೋ ಕೆಲಸ’ ಎಂದು ಕೇಳಿ ವ್ಯಕ್ತಿಯೊಬ್ಬ ಇಬ್ಬರು ಯುವಕರ ಮೇಲೆ ದಾಳಿ ಮಾಡಿದ್ದಾನೆ. ಕತ್ತಿ ಮತ್ತು ರಾಡ್ನಿಂದ ಮೊದಲು ಯುವಕನ ಕಾರಿನ ಮೇಲೆ ದಾಳಿ ಮಾಡಿದ ವ್ಯಕ್ತಿ, ಯುವಕ ಮನೆಯಿಂದ ಹೊರಬರುತ್ತಿದ್ದಂತೆಯೇ ಆತನ ಮೇಲೂ ಎರಗಿರುವ ಘಟನೆ ಸಾಗರದ ಬೆಳಲಮಕ್ಕಿಯಲ್ಲಿ ನಡೆದಿದೆ.
ಘಟನಾ ವಿವರ :
ರವಿಕುಮಾರ್ ಎಂಬಾತ ಪತ್ನಿ ಜತೆ ಒಂದು ಮನೆಯಲ್ಲಿ ವಾಸವಾಗಿದ್ದ. ಅಲ್ಲೇ ಪಕ್ಕದ ಮನೆಯಲ್ಲಿ ನವೀನ್ ಎಂಬಾತ ವಾಸವಾಗಿದ್ದ. ನವೀನ್ ತನ್ನ ಪತ್ನಿ ಜತೆ ಮಾತನಾಡುತ್ತಿರುವುದು ರವಿಕುಮಾರ್ ಗಮನಕ್ಕೆ ಬಂದಿತ್ತು. ಈ ವಿಚಾರದಲ್ಲಿ ಮನೆಯಲ್ಲೂ ಮಾತು, ಚಕಮಕಿ ನಡೆದಿತ್ತು. ಈ ನಡುವೆ ರವಿಕುಮಾರ್ ಸಿಟ್ಟಿನಿಂದ ನವೀನ್ ಕುಮಾರ್ ಮನೆಯ ಬಳಿ ಹೋಗಿದ್ದಾನೆ. ಮೊದಲು ಮನೆಯ ಹೊರಗಿದ್ದ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದಾನೆ. ಕತ್ತಿ ಹಾಗೂ ರಾಡ್ನಿಂದ ನವೀನ್ ಕಾರಿಗೆ ಹಾನಿ ಮಾಡಿದ್ದಾರೆ. ಕಾರಿನ ಗಾಜು ಒಡೆಯುತ್ತಿರುವುದನ್ನು ತಿಳಿದ ನವೀನ್ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ರವಿಕುಮಾರ್ ಆತನ ಮೇಲೆ ನೇರ ದಾಳಿ ಮಾಡಿದ್ದಾನೆ.
ರವಿಕುಮಾರ್ ದಾಳಿ ಮಾಡುತ್ತಿರುವುದನ್ನು ನೋಡಿ ನವೀನ್ನ ಸ್ನೇಹಿತ ಧರೇಶ್ ಅಲ್ಲಿಗೆ ಓಡಿ ಬಂದ. ಆಗ ರವಿಕುಮಾರ್ ಆತನ ಮೇಲೂ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ನವೀನ್ ಹಾಗೂ ಧರೇಶ್ ಗೆ ಗಾಯಗಳಾಗಿವೆ. ನವೀನ್ ಬೆರಳು ತುಂಡಾಗಿದ್ದು, ಎದೆ ಭಾಗಕ್ಕೆ ತೀವ್ರ ಗಾಯವಾಗಿದೆ ಈತನನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೊಬ್ಬ ಗಾಯಾಳು ಧರೇಶ್ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ರವಿಕುಮಾರ್ ವಶಕ್ಕೆ ಪಡೆದ ಪೊಲೀಸರು ಸಾಗರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.