ಭಾಷೆ ಮತ್ತಿತರ ವಿಷಯಗಳಲ್ಲಿ ಸಾಮರಸ್ಯ ಸಾಧಿಸಲು ಸಂಗೀತ ಸಹಕಾರಿ
ಹೊಸನಗರ : ತ್ಯಾಗರಾಜರ ಕೀರ್ತನೆಗಳು ಸಾರ್ವಕಾಲಿಕವಾಗಿದ್ದು ನೂರಾರು ವರ್ಷದಿಂದ ಪ್ರಾಂತ, ಭಾಷೆಗಳ ಭೇದವಿಲ್ಲದೆ ಎಲ್ಲೆಡೆ ಹಾಡಲಾಗುತ್ತಿದೆ. ಇನ್ನೂ ಸಾವಿರಾರು ವರ್ಷಗಳ ಕಾಲ ಹಾಡಲಾಗುತ್ತದೆ. ಅವರ ತೀರ್ತನೆಗಳಿಗೆ ಅಂಥ ಶಕ್ತಿ ಇದೆ. ಭಾಷೆ ಮತ್ತಿತರ ವಿಷಯಗಳಲ್ಲಿ ಸಾಮರಸ್ಯ ಸಾಧಿಸಲು ಸಂಗೀತ ಸಹಕಾರಿ ಎಂದು ವಿದುಷಿ ಶೀಲಾರಾಮನ್ ಹೇಳಿದರು.
ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ ಕಾರಣಗಿರಿ ಆಶ್ರಯದಲ್ಲಿ ನಡೆದ ತ್ಯಾಗರಾಜ ಆರಾಧನೆ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮಭಾರತಿ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ. ಎಸ್. ನಳಿನಚಂದ್ರ, ಹನಿಯ ರವಿ ಮತ್ತಿತರರು ಪಾಲ್ಗೊಂಡಿದ್ದರು.
ಗಾನಸುಧಾ ಸಂಗೀತ ಶಾಲೆ, ರಾಗಲಹರಿ ಸಂಗೀತ ಶಾಲೆ, ಸರಸ್ವತಿ ಸಂಗೀತ ಶಾಲೆ, ಅಮೃತ ಶಾಲೆ ನಗರ, ಶಾರದಾ ಸಂಗೀತ ಶಾಲೆ ಮತ್ತಿತರ ಸಂಗೀತ ಶಾಲೆಗಳವರಿಂದ ಕೀರ್ತನೆಗಳ ಗಾಯನ ನಡೆಯಿತು. ಕೊನೆಯಲ್ಲಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಿತು.
ಗಣೇಶ್ ಪಕ್ಕವಾದ್ಯದಲ್ಲಿ ಸಹಕರಿಸಿದರು. ವಿನಾಯಕ ಪ್ರಭು ಸ್ವಾಗತಿಸಿ, ಹನಿಯ ಗುರುಮೂರ್ತಿ ನಿರೂಪಿಸಿದರು.