ಮೋದಿ ಗ್ಯಾರಂಟಿ ನಂಬಿದ್ರೆ ಚೊಂಬು ಕಾಂಗ್ರೆಸ್ ಗ್ಯಾರಂಟಿ ನಂಬು ; ರಣದೀಪ್ ಸಿಂಗ್ ಸುರ್ಜೀವಾಲ

0 187

ಶಿವಮೊಗ್ಗ : ಮೋದಿ ಗ್ಯಾರಂಟಿ ನಂಬಿದ್ರೆ ಚೊಂಬು ಕಾಂಗ್ರೆಸ್ ಗ್ಯಾರಂಟಿ ನಂಬು ಎಂದು ರಣದೀಪ್ ಸಿಂಗ್ ಸುರ್ಜೀವಾಲ ಹೇಳಿದರು.

ಇಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿಯ ಜೊತೆಗೆ ಕೇಂದ್ರದ ಕಾಂಗ್ರೆಸ್ಸಿನ ಗ್ಯಾರಂಟಿಗಳು ದೇಶದ ಪ್ರತಿಯೊಬ್ಬರಿಗೂ ತಲುಪಲಿದ್ದು, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲ ಹೇಳಿದ್ದಾರೆ.

ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗ್ಯಾರಂಟಿ ಹಬ್ಬ ಉದ್ಘಾಟಿಸಿ ಮಾತನಾಡಿ ದರು, ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರಂಟಿಯನ್ನು ಘೋಷಿಸಿದಾಗ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅಪಹಾಸ್ಯ ಮಾಡಿ ನಕ್ಕಿದ್ದರು. ಕಾಂಗ್ರೆಸ್ ಬಂದರೇ ತಾನೇ ಗ್ಯಾರಂಟಿ ಕೊಡುವುದು ಎಂದು ಲೇವಡಿ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿದ್ದೇವೆ. 6 ತಿಂಗಳ ಒಳಗೆ ಘೋಷಿತ 5 ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದರು.

1 ಕೋಟಿ 30 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ.ಗಳು ಗೃಹಲಕ್ಷ್ಮಿ ಯೋಜನೆಯಡಿ ಅವರ ಖಾತೆಗೆ ಜಮವಾಗುತ್ತಿದೆ. ಅಕ್ಕಿ ಕೊಳೆಯುತ್ತ ಬಿದ್ದಿದ್ದರೂ ಸಹ ಕೇಂದ್ರ ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿದರು ಕೂಡ 5 ಕೆ.ಜಿ. ಅಕ್ಕಿ ಮತ್ತು 5 ಕೆ.ಜಿ. ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ. ಸುಮಾರು 4.49 ಕೋಟಿ ಜನರಿಗೆ ಇದರ ಲಾಭ ಸಿಗುತ್ತಿದೆ. ಯುವನಿಧಿಯಡಿ 1.50 ಲಕ್ಷ ಯುವಕರಿಗೆ ಗ್ಯಾರಂಟಿ ಸಿಗುತ್ತಿದೆ. ಅದು ಮುಂದಿನ ದಿನಗಳಲ್ಲಿ 10 ಲಕ್ಷ ಯುವಕರಿಗೆ ಸಿಗಲಿದೆ. ಶಕ್ತಿ ಯೋಜನೆಯಡಿ ಪ್ರತಿನಿತ್ಯ 35 ಲಕ್ಷ ಮಹಿಳೆಯರು ಉಚಿತವಾಗಿ ರಾಜ್ಯದಾದ್ಯಂತ ಪ್ರಯಣಿಸುತ್ತಿದ್ದಾರೆ. 177 ಕೋಟಿ ರೂ.ಗಳ ಪ್ರಯೋಜನ ಪಡೆದಿದ್ದಾರೆ ಎಂದರು.

1.18 ಕೋಟಿ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರ ಜೊತೆಗೆ ಈಗ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ವರ್ಷ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ 1 ಲಕ್ಷ ನೀಡಲಾಗುತ್ತಿದ್ದು, ತಿಂಗಳಿಗೆ 8,300 ರೂ.ಸಿಗಲಿದೆ. ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿಯ 2 ಸಾವಿರ ಸೇರಿ 10,300 ರೂ. ಸಿಗಲಿದೆ. ವಿದ್ಯಾವಂತ ನಿರುದ್ಯೋಗಿಗಳಿಗೂ ಕೂಡ ಯುವ ಬೆಳಕು ಯೋಜನೆಯಡಿ ಪ್ರತಿವರ್ಷ 1 ಲಕ್ಷ ವೇತನ ಸಿಗಲಿದೆ. ಕೃಷಿ ಸಾಲ ಮನ್ನಾಕ್ಕೆ ಶಾಶ್ವತ ಆಯೋಗ ರಚನೆ ಮಾಡಿ, ಇಡೀ ದೇಶದ ಎಲ್ಲಾ ರೈತರಿಗೆ 2 ಲಕ್ಷ ರೂ.ಗಳ ವರೆಗೆ ಸಾಲ ಮನ್ನಾ ಮಾಡಲಾಗುವುದು. ರಾಷ್ಟ್ರೀಯ ಕನಿಷ್ಟ ವೇತನಯಡಿ ನರೇಗಾ ಕಾರ್ಮಿಕರಿಗೆ ಶ್ರಮಿಕ್ ನ್ಯಾಯ ಯೋಜನೆಯಡಿ ದಿನಕ್ಕೆ 400 ರೂ. ಕೂಲಿ ಮತ್ತು ರಾಜ್ಯದ 130 ರೂ. ಸೇರಿ 530 ರೂ.ಗಳು ಕೂಲಿ ಸಿಗಲಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಜಾತಿ ಗಣತಿಯನ್ನು ಕೂಡ ಮಾಡಲಾಗುವುದು. ರೈತರಿಗೆ ಎಂಎಸ್‌ಪಿ ಬೆಲೆ ನಿಗಧಿಪಡಿಸಲು ಕಾನೂನು ರಚಿಸಲಾಗುವುದು. 5ನೇ ಗ್ಯಾರಂಟಿಯಾಗಿ ದೇಶದ ಎಲ್ಲಾ ಪರಿವಾರಕ್ಕೆ ಸರ್ಕಾರದಿಂದಲೇ ಪ್ರೀಮಿಯಂ ಭರಿಸಿ 25 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ನೀಡಲಾಗುವುದು. ಇದರಿಂದ ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆಯಬಹುದು ಎಂದರು.

ಇದಕ್ಕೆಲ್ಲ ಶಿವಮೊಗ್ಗದಿಂದಲೇ ಮೊದಲ ಜಯದ ಬಾವುಟ ಹಾರಿಸಬೇಕು. ಗೀತಾ ಶಿವರಾಜ್‌ಕುಮಾರ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ನಮ್ಮ ಬೂತ್ ನಮ್ಮ ಜವಾಬ್ದಾರಿ ಎಂಬ ಅಭಿಯಾನ ಪ್ರಾರಂಭಿಸಲಾಗಿದ್ದು, ಪ್ರತಿ ಮನೆಗೆ ಬೆಳಿಗ್ಗೆ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ರಾಷ್ಟ್ರೀಯ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ತಿಳುವಳಿಕೆ ನೀಡಬೇಕು. ಊಟ ನಿದ್ರೆ ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯವನ್ನು ಮಾಡಬೇಕು. ಮಂತ್ರಿಯೇ ಇರಲಿ, ಯಾವುದೇ ದೊಡ್ಡ ಪದಾಧಿಕಾರಿಗಳು ಇದ್ದರೂ ಸಹ ಪಕ್ಷದ ಕೆಲಸವನ್ನು ಮಾಡದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.

ರಾಜ್ಯದ ಕಾನೂನು ಸುವ್ಯವಸ್ಥೆಗೆ ಯಾವ ಜಾತಿ ಧರ್ಮದವರಿಗೂ ಕೂಡ ಬಿಡುವ ಪ್ರಶ್ನೆಯೇ ಇಲ್ಲ. ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.


ಜಿಎಸ್‌ಟಿಯಿಂದ ಕೇಂದ್ರಕ್ಕೆ ನೂರು ರೂ. ರಾಜ್ಯದಿಂದ ಹೋದರೆ, ಕೇವಲ 13 ರೂ. ಸಿಗುತ್ತಿದ್ದು, ರಾಜ್ಯ ಬರಗಾಲದಿಂದ ಬಳಲುತ್ತಿದ್ದರು ಕೂಡ ಕೇಂದ್ರ ಸರ್ಕಾರ ರಾಜ್ಯದ ಪಾಲನ್ನು ನೀಡಿಲ್ಲ. ಜೂ.3ರ ನಂತರ ನಾವು ಅಧಿಕಾರಕ್ಕೆ ಬಂದ ಬಳಿಕ ಜಿ.ಎಸ್.ಟಿ.ಯನ್ನು ರದ್ದುಪಡಿಸಲಾಗುವುದು. ಈಗ 7 ವಿಧಗಳಿಂದ ಜಿಎಸ್‌ಟಿ ಸಂಗ್ರಹ ಮಾಡುತ್ತಿದ್ದಾರೆ. ಈ ಅವೈಜ್ಞಾನಿಕ ತೆರಿಗೆ ಪದ್ಧತಿಯನ್ನು ತೆಗೆಯುತ್ತೇವೆ ಎಂದರು.

ಬಿಜೆಪಿ 200 ಸ್ಥಾನಗಳನ್ನು ದಾಟಲ್ಲ. ಮೋದಿ ಸರ್ಕಾರ ಮತದಾರರ ಕೈಗೆ ಚೊಂಬು ನೀಡುವ ಸರ್ಕಾರ ಎಂದು ಚೊಂಬು ಇರುವ ಜಾಹಿರಾತನ್ನು ಪ್ರದರ್ಶಿಸಿದರು. 2 ಕೋಟಿ ನೌಕರಿ ನೀಡಿಲ್ಲ. 15 ಲಕ್ಷ ಖಾತೆಗೆ ಜಮಾ ಮಾಡಿಲ್ಲ, ನಮಗೆ ಮತದಾರರೇ ದೇವರು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಸಂಗಮೇಶ್, ಮಂಜುನಾಥ ಭಂಡಾರಿ, ಪ್ರಮುಖರಾದ ಹೆಚ್.ಸಿ. ಯೋಗೀಶ್, ಹೆಚ್. ಎಸ್. ಸುಂದರೇಶ್, ಚಂದ್ರಭೂಪಾಲ್, ಎನ್.ರಮೇಶ್, ಡಾ. ಶ್ರೀನಿವಾಸ ಕರಿಯಣ್ಣ, ಅನಿತಾಕುಮಾರಿ, ಎಂ. ಶ್ರೀಕಾಂತ್, ಕಲೀಂ ಪಾಶಾ, ರವಿಕುಮಾರ್, ಪಲ್ಲವಿ, ರೇಖಾ ರಂಗನಾಥ್, ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!