ಹೊಸನಗರ ; ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ
ಹೊಸನಗರ: ಪಟ್ಟಣದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ|| ಸುರೇಶ್ರವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು (Tobacco) ನಿಯಂತ್ರಣ ಕಾಯ್ದೆಯನ್ವಯ ಹೊಸನಗರ (Hosanagara) ಪಟ್ಟಣದ ಸುಮಾರು 25 ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 3 ಸಾವಿರ ರೂ. ನಷ್ಟು ಹಣವನ್ನು ಸರ್ಕಾರದ ಬೊಕ್ಕಸಕ್ಕೆ ತುಂಬಿಸಿದ್ದಾರೆ.
ದಾಳಿ ನಡೆಸುವ ಸಂದರ್ಭದಲ್ಲಿ ಮಾತನಾಡಿದ ಬಿ.ಹೆಚ್.ಇ.ಓ ಕರಿಬಸಮ್ಮ, ತಂಬಾಕು ನಮ್ಮ ದೇಹವನ್ನು ಸಂಪೂರ್ಣ ಸುಟ್ಟು ಹಾಕುತ್ತದೆ. ಈ ಬಗ್ಗೆ ಸರ್ಕಾರಗಳು ಜನಪ್ರತಿನಿಧಿಗಳು ಎಷ್ಟೇ ಹೇಳಿದರೂ ತಂಬಾಕು ಸೇವಿಸುವವರು ಕಡಿಮೆ ಮಾಡುತ್ತಿಲ್ಲ. ಇದರಿಂದ ನಿಮ್ಮ ದೇಹ ಸುಡುವುದರ ಜೊತೆಗೆ ಎಷ್ಟೋ ಸಂಸಾರಗಳು ಬೀದಿಗೆ ಬಂದಿದೆ. ಯಜಮಾನನಿಲ್ಲದ ಮನೆ ದೇವರಿಲ್ಲದ ಗುಡಿಯಂತೆ. ಮನೆಯ ಯಜಮಾನನ್ನು ಕಳೆದುಕೊಂಡಂತಾಗುತ್ತದೆ. ತಂಬಾಕು ಸೇವೆಯಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಾರೆ. ಈ ತಂಬಾಕು ಮನುಷ್ಯರ ದೇಹಕ್ಕೆ ಹಲವಾರು ಕಾಯಿಲೆಗೆ ನಾವೇ ಆಹ್ವಾನ ನೀಡಿದಂತಾಗುತ್ತದೆ. ಮನೆಯ ಯಜಮಾನ ತಂಬಾಕು ಸೇವನೆಯಿಂದ ಮುಕ್ತಿ ಹೊಂದಿದರೇ ಇಡೀ ಕುಟುಂಬವೇ ಸುಖ ಸಂತೋಷದಿಂದ ಇರಬಹುದು. ಆದ್ದರಿಂದ, ತಂಬಾಕಿನಿಂದ ಮುಕ್ತಿ ಹೊಂದಿ ಜೊತೆಗೆ ಮಾರಾಟಗಾರರು ತಂಬಾಕು ಮಾರಾಟ ಮಾಡದಿದ್ದರೆ ಹೊಸನಗರ ತಾಲ್ಲೂಕು ತಂಬಾಕು ಮುಕ್ತ ತಾಲ್ಲೂಕಾಗಿ ಮಾಡಬಹುದು. ಆದ್ದರಿಂದ ಎಲ್ಲ ಅಂಗಡಿ ಮಾಲೀಕರು ನಮ್ಮೊಂದಿಗೆ ಕೈಜೋಡಿಸಿ ತಂಬಾಕು ಮುಕ್ತ ಹೊಸನಗರ ಮಾಡಲು ಸಹಕರಿಸಿ ಎಂದರು.
ಈ ದಾಳಿಯ ಸಂದರ್ಭದಲ್ಲಿ ಜಿಲ್ಲಾ ಸಮಾಜ ಕಾರ್ಯಕರ್ತ ರವಿರಾಜ್ ಜಿ.ಕೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ್ ಆಚಾರ್, ಕ್ಷಯರೋಗ ನಿಯಂತ್ರಣ ಮೇಲ್ವಿಚಾರಕ ಚಂದ್ರಪ್ಪ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಪೊಲೀಸ್ ಇಲಾಖೆಯ ವಸಂತ್ ಹಾಗೂ ಪಿಹೆಚ್ಸಿಓ ಗೀತಾ, ಬಿ.ಪಿ.ಎಂ ನಿಕೀತ್ರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.