ಶಿವಮೊಗ್ಗ ನಿಗೂಢ ಬಾಕ್ಸ್ ಬಯಲಾಯ್ತು ಅಸಲಿ ಸತ್ಯ

0 204

ಶಿವಮೊಗ್ಗ : ಇಲ್ಲಿನ ರೈಲ್ವೆ ನಿಲ್ದಾಣದ ಬಳಿ‌ ಪತ್ತೆಯಾದ ಎರಡು ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.

ಬೃಹತ್ ಬಾಕ್ಸ್ ಗಳು ಪತ್ತೆಯಾಗುತ್ತಿದ್ದಂತೆ ತನಿಖೆಗೆ ಇಳಿದ ಪೊಲೀಸರು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಭದ್ರಾವತಿ ಮೂಲದ ನಸ್ರುಲ್ಲಾ ಹಾಗೂ ತಿಪಟೂರಿನ ಜಬೀವುಲ್ಲಾ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಸದ್ಯ ಪೊಲೀಸರ ವಿಚಾರಣೆಯಲ್ಲಿ ಬಾಕ್ಸ್ ಹಿಂದಿನ ಅಕ್ರಮದ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಾಕ್ಸ್ ನಲ್ಲಿ ಕಂತೆ, ಕಂತೆ ಹಣ ಇದೆ. ಆ ಬಾಕ್ಸ್ ನಿಮ್ಮದಾಗಲು 5 ಲಕ್ಷ ಕೊಡಿ ಬಳಿಕ ಬಾಕ್ಸ್ ತೆಗೆದುಕೊಂಡು ಹೋಗಿ ಎಂದು ಉದ್ಯಮಿಯೊಬ್ಬರಿಗೆ ಈ ಖದೀಮರು ಟೋಪಿ ಹಾಕಿದ್ದ ಬಗ್ಗೆ ತನಿಖೆಯಲ್ಲಿ ಬಯಲಾಗಿದೆ.

ಆರೋಪಿ ನಸ್ರುಲ್ಲಾ ಮತ್ತು ಜಬೀವುಲ್ಲಾ ಎಂಬ ಇಬ್ಬರು ಬೇಗ ಹಣ ಮಾಡಬೇಕು ಎಂಬ ದುರುದ್ದೇಶದಿಂದ ತಿಪಟೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವವರನ್ನು ಸಂಪರ್ಕಿಸಿ, ನಮಗೆ ಹಣ ತುಂಬಿದ ಬಾಕ್ಸ್ಗಳು ಸಿಕ್ಕಿವೆ. ಹಣ ಬೇಕಾ ಎಂದು ಹಣದ ಆಸೆ ತೋರಿಸಿದ್ದರು. ಬಳಿಕ ಹಣ ಬೇಕಾದರೆ ಮೊದಲು ಎರಡೂವರೆ ಲಕ್ಷ ಹಣವನ್ನು ನಮ್ಮ ಖಾತೆಗೆ ಹಾಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ರಮೇಶ್ ಹಣ ಕಳಿಸಿದ್ದಾರೆ. ನಂತರ ಹಣ ಪಡೆದು ಒಂದು ವಾರ ಕಳೆದರೂ ಹಣದ ಬಾಕ್ಸ್ ಗಳನ್ನು ತೋರಿಸದ ಕಾರಣ ರಮೇಶ್, ಆರೋಪಿಗಳಿಗೆ ಕರೆ ಮಾಡಿ ತಾನು ಕೊಟ್ಟ ಹಣವನ್ನು ವಾಪಾಸ್ ಕೊಡುವಂತೆ ಮನವಿ ಮಾಡಿದ್ದಾರೆ. ಆಗ ಆರೋಪಿಗಳು ಹಣ ಬೇಕಾದರೆ ಮತ್ತೆ ಎರಡೂವರೆ ಲಕ್ಷ ಹಣ ಹಾಕುವಂತೆ ತಿಳಿಸಿದ್ದಾರೆ.

ಹೀಗೆ ಒಟ್ಟು ಐದು ಲಕ್ಷ ಹಣ ಪಡೆದಿದ್ದಾರೆ. ಬಳಿಕ ಹಣ ಬೇಕಾದರೆ ಶಿವಮೊಗ್ಗಕ್ಕೆ ಬಾ ಎಂದು ಕರೆಸಿಕೊಂಡು ರೈಲ್ವೆ ನಿಲ್ದಾಣದ ಬಳಿ ಹಣದ ಪೆಟ್ಟಿಗೆ ಇದೆ ಎಂದು ಬಾಕ್ಸ್ ತೋರಿಸಿದ್ದಾರೆ. ಬಾಕ್ಸ್ ನೋಡುತ್ತಿದ್ದಂತೆ ಅನುಮಾನಗೊಂಡ ರಮೇಶ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆರೋಪಿಗಳು ಬಾಕ್ಸ್ ನಲ್ಲಿ ಉಪ್ಪಿನ ಚೀಲ ತುಂಬಿ ಪ್ಯಾಕ್ ಮಾಡಿಟ್ಟಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ನವೆಂಬರ್ 05ರಂದು ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್ನಲ್ಲಿ 2 ಅನಾಮಧೇಯ ಬಾಕ್ಸ್ ಪತ್ತೆ ಆಗಿತ್ತು. ಜೊತೆಗೆ ಬಾಕ್ಸ್ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಮತ್ತು ಫುಡ್ ಗ್ರೈನ್ಸ್ ಆಯಂಡ ಶುಗರ್ಸ್ ಎಂದು ಬರೆಯಲಾಗಿತ್ತು. ಬಾಕ್ಸ್ಗಳ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕೂಡಲೇ ಬಾಂಬ್ ಸ್ಕ್ವಾಡ್, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಬಾಕ್ಸ್ ಬಳಿ ಯಾರೂ ತೆರಳದಂತೆ ಬ್ಯಾರಿಕೇಡ್ ಹಾಕಲಾಗಿತ್ತು. ಬಳಿಕ ತುಮಕೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಹಣ ಗಳಿಕೆಗಾಗಿ ಬಾಕ್ಸ್ ಗಳಲ್ಲಿ ಉಪ್ಪು ತುಂಬಿ ಹಣ ಇದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

Leave A Reply

Your email address will not be published.

error: Content is protected !!