ಮರಳು ಅಕ್ರಮಕ್ಕೆ ಪ್ರಭಾವಿ ವ್ಯಕ್ತಿಗಳ ಬೆಂಗಾವಲು ?
ಶರಾವತಿ ಹಿನ್ನೀರು ಪ್ರದೇಶದಲ್ಲಿ ನಿರಂತರ ಮರಳು ಗಣಿಗಾರಿಕೆ, ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ; ಗಿರೀಶ್ ಆಚಾರ್

0 3,117

ಹೊಸನಗರ: ತಾಲೂಕಿನ ಸುತ್ತಾ, ಕಾರಣಗಿರಿ, ಬಾಳೆಕೊಪ್ಪ ಎಡಚಿಟ್ಟೆ, ಮುಳುಗುಡ್ಡೆ, ತ್ರಿಣಿವೆ, ನಂದಿಹೊಳೆ, ಈಚಲಕೊಪ್ಪ, ಮುತ್ತಲ, ಗವಟೂರು ಗ್ರಾಮಗಳ ಸುತ್ತಮುತ್ತಲ ಪ್ರದೇಶದಿಂದ ನಿತ್ಯವೂ ನೂರಾರು ಲೋಡ್ ಮರಳು ಅಕ್ರಮ ಸಾಗಾಟ ನಡೆಯುತ್ತಿದೆ. ಪರವಾನಗಿ ಇಲ್ಲದೇ ಟಿಪ್ಪರ್‌ಗಳ ಮೂಲಕ ಶಿವಮೊಗ್ಗ ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಮರಳು ಸರಬರಾಜು ಆಗುತ್ತಿದ್ದು, ಹೆಚ್ಚಿನ ದರಕ್ಕೆ ಮರಳು ಮಾರಿ ಅಕ್ರಮ ಸಂಪಾದನೆಯಲ್ಲಿ ದಂಧೆಕೋರರು ತೊಡಗಿಕೊಂಡಿದ್ದಾರೆ. ಅಕ್ರಮ ಮರಳುಗಾರಿಕೆಯ ವಿರುದ್ಧ ಹೊಸನಗರದ ಎಲ್ಲಾ ಇಲಾಖೆಗಳಿಗೆ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ದರಣಿ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ. ಮುಂದಿನ ದಿನದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸತ್ಯಾಗ್ರಹ ನಡೆಸುವುದರ ಜೊತೆಗೆ ಸರ್ಕಾರದ ಕಣ್ಣು ತೆರೆಸಲಾಗುವುದು ಎಂದು ಜನಸಂಗ್ರಾಮ ಪರಿಷತ್ ಸದಸ್ಯ ಗಿರೀಶ್ ಆಚಾರ್ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.


ಗ್ರಾಮೀಣ ಪ್ರದೇಶ ಮಾತ್ರವಲ್ಲದೇ, ಪಟ್ಟಣಕ್ಕೆ ಸಮೀಪದಲ್ಲಿಯೂ ಮರಳು ದಂಧೆ ನಡೆಯುತ್ತಿದ್ದು, ಅಧಿಕಾರಿ ವರ್ಗ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಭೂ ಮತ್ತುಗಣಿ ಇಲಾಖೆಯಿಂದ ಯಾವುದೇ ಪರವಾನಗಿ ಇಲ್ಲದಿದ್ದರೂ, ರಾಜಾರೋಷವಾಗಿ ರಾಜಧನ ವಂಚಿಸಿ ಅಕ್ರಮವಾಗಿ ಮರಳು ಸಾಗಾಟ ಮಾಡುವುದಕ್ಕೆ ಬೆಂಗಾವಲಾಗಿ ನಿಂತಿರುವುದು ಯಾರು ? ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.


ಅಕ್ರಮ ತಡೆಗೆ ರಚಿಸಿರುವ ಟಾಸ್ಕ್ ಫೋರ್ಸ್ ಭಾಗವಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಾಲ್ಲೂಕು ಕಛೇರಿ, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಕೈಗೊಂಡರೆ ಅಕ್ರಮ ಮರಳು ದಂಧೆ ತಡೆಯುವುದು ಕಷ್ಟವೇನಲ್ಲ ಎಂದ ಅವರು, ಆದರೆ ಇಲಾಖೆ ಅಧಿಕಾರಿಗಳು ಅಕ್ರಮದ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳದಿರುವುದರ ಹಿಂದಿನ ಕಾರಣವೇನು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಅಕ್ರಮ ಮರಳು ಸಂಗ್ರಹ, ಸಾಗಾಣಿಕೆಯ ಜಾಲಕ್ಕೆ ಕೆಲ ಪ್ರಭಾವಿ ವ್ಯಕ್ತಿಗಳು ಕೈಜೋಡಿಸಿರುವ ಕಾರಣದಿಂದಲೇ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ನಾವು ಯಾವುದೇ ಮನವಿ ಪತ್ರ, ಧರಣಿ ನಡೆಸಿದರೂ ಪ್ರಯೋಜನವಾಗುತ್ತಿಲ್ಲ ಎಂದರು.


ನೀರಿನ ಆಳದಿಂದ ಮರಳು ಸಂಗ್ರಹ ಮಾಡಲು ಮಾರುತಿಪುರ, ಪುರಪ್ಪೆಮನೆ ಗ್ರಾಪಂ ವ್ಯಾಪ್ತಿ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲ ಕಡೆಗಳಲ್ಲಿ ಜೆಸಿಬಿ ಯಂತ್ರ ಬಳಸಿಯೂ ಮರಳು ಸಂಗ್ರಹ ಮಾಡುತ್ತಿದ್ದಾರೆ ಎಂದರು.


ನಾನು ಈಗಾಗಲೇ ಜಿಲಾಧ್ಲಿಕಾರಿ, ಲೋಕಾಯುಕ್ತ ಸೇರಿದಂತೆ ವಿವಿಧೆಡೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಒತ್ತಾಯಿಸಿ ದೂರು ದಾಖಲಿಸಿದ್ದೇನೆ. ಆದರೆ ಮರಳು ದಂಧೆ ನಿರಾತಂಕವಾಗಿ ಮುಂದುವರೆದಿದೆ. ಸಾಲದ್ದಕ್ಕೆ ರಾಜಕೀಯ ಮೇಲಾಟವೂ ಮರಳು ದಂಧೆಯ ಜೊತೆ ತಳುಕು ಹಾಕಿಕೊಂಡಿದೆ. ವಾಸ್ತವದಲ್ಲಿ ನಡೆಯುತ್ತಿರುವುದೇ ಆಡಳಿತ ರಾಜಕೀಯ ಪಕ್ಷದಿಂದ ಬಹುತೇಕ ಲಾರಿ ಮಾಲಿಕರು ರಾಜಕೀಯ ಪಕ್ಷಗಳ ಕಾರ‍್ಯಕರ್ತರಾಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ನದಿ ಪಾತ್ರದಲ್ಲಿ ಮರಳು ಸಂಗ್ರಹದ ಸ್ಥಳಗಳನ್ನೂ ಅವರವರೇ ಇಂದಿನ ರಾಜಕೀಯ ಪಕ್ಷದ ಕಾರ್ಯಕರ್ತರು ಹಂಚಿಕೊಂಡಿದ್ದಾರೆ ಎಂದ ಅವರು, ತಕ್ಷಣ ಅಕ್ರಮ ಮರಳಿಗೆ ಅಧಿಕಾರಿಗಳು ತಡೆ ಮಾಡಬೇಕು ಇಲ್ಲವಾದರೇ ಮುಂದಿನ ದಿನದಲ್ಲಿ ಅಧಿಕಾರಿಗಳು ನೆರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

Leave A Reply

Your email address will not be published.

error: Content is protected !!