ಶಿವಮೊಗ್ಗ ಸುದ್ದಿ ಶಿವಮೊಗ್ಗ

ಶಿವಮೊಗ್ಗ: ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತರ ಮದುವೆ ತಡೆದ ತಹಶೀಲ್ದಾರ್ ರಾಜೀವ್

ಶಿವಮೊಗ್ಗ: ನಗರದ ವಿನೋಬನಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತರ ಮದುವೆ ನಡೆಯುತ್ತಿರುವ ಮಾಹಿತಿ ಮೇರೆಗೆ, ತಹಶಿಲ್ದಾರ್ ರಾಜೀವ್ ಅವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಎರಡು ಜೋಡಿಗಳ ಮದುವೆಯನ್ನು ತಡೆಗಟ್ಟಿದೆ.

ಭಾರತೀಯ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಒಟ್ಟು 8 ಜೋಡಿಗಳ ಮದುವೆ ನಡೆಯಬೇಕಿತ್ತು. ದಾಖಲೆ ಪರಿಶೀಲನೆ ವೇಳೆ ಎರಡು ಜೋಡಿಗಳು ಅಪ್ರಾಪ್ತರು ಎಂದು ದೃಢಪಟ್ಟಿದ್ದು, ಆರು ಜೋಡಿಗಳ ಮದುವೆಗೆ ಮಾತ್ರ ಅವಕಾಶ ನೀಡಲಾಗಿದೆ. ಅಪ್ರಾಪ್ತರನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ಕಾನೂನು ಪ್ರಕಾರ ಮಕ್ಕಳ ಮತ್ತು ಮಹಿಳಾ ಇಲಾಖೆಯ ವಶಕ್ಕೆ ಒಪ್ಪಿಸಿದೆ. ಕುಟುಂಬಗಳಿಗೆ ಜಾಗೃತಿ ಮೂಡಿಸಲಾಗಿದೆ.

ರಾಜ್ಯ ಸರ್ಕಾರ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ), 2025 ಕರಡು ಮಸೂದೆ ಸಿದ್ಧಪಡಿಸಿದೆ. ಹೊಸ ಪ್ರಸ್ತಾಪಿತ ಕಾನೂನಿನಲ್ಲಿ ಮದುವೆ ನೆರವೇರಿಸುವುದಷ್ಟೇ ಅಲ್ಲ, ಬಾಲ್ಯ ವಿವಾಹಕ್ಕೆ ಸಿದ್ಧತೆ, ನಿಶ್ಚಿತಾರ್ಥ ಮತ್ತು ಸಹಭಾಗಿತ್ವ ಕೂಡ ಶಿಕ್ಷಾರ್ಹವಾಗಲಿದೆ. ದೋಷಿಗಳಾಗುವವರಿಗೆ ಗರಿಷ್ಠ 2 ವರ್ಷ ಜೈಲು ಅಥವಾ ₹1 ಲಕ್ಷ ದಂಡ ಅಥವಾ ಎರಡೂ ವಿಧಿಸಲಾಗಬಹುದು.

ಬಾಲ್ಯ ವಿವಾಹ ನಿಷೇಧದಲ್ಲಿ ರಾಜ್ಯ ಸರ್ಕಾರದ ಈ ತಿದ್ದುಪಡಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ತೀವ್ರ ತಡೆ ಒದಗಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Leave a Comment