ಶ್ರೀಕ್ಷೇತ್ರ ಹೊಂಬುಜದಲ್ಲಿ ವಿಶೇಷ ಪೂಜೆ | ಶೈಕ್ಷಣಿಕ ಪ್ರಗತಿಯತ್ತ ಯುವ ಪೀಳಿಗೆ, ನಾಗರಿಕರು ರಾಷ್ಟ್ರದ ಏಳಿಗೆಯತ್ತ ಸಾಗಲಿ ; ಶ್ರೀಗಳು

Written by Mahesha Hindlemane

Published on:

ಹೊಂಬುಜ : ಅತಿಶಯ ಶ್ರೀಕ್ಷೇತ್ರ ಹೊಂಬುಜದ ಪ್ರಾಚೀನ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ವಿಶ್ವವಂದ್ಯ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಊರ-ಪರವೂರ ಭಕ್ತಾಭಿಮಾನಿಗಳು ನೂತನ ವರ್ಷ 2026 ಇಷ್ಟಾರ್ಥ ಲಭಿಸುವಂತೆ ಪ್ರಾರ್ಥಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಂಬುಜ ಶ್ರೀಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು “ಹೊಸ ವರ್ಷದ ಸ್ವಾಗತ ಮಾಡುವ ಭಕ್ತರು, ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಶ್ರೀಮುಖ ದರ್ಶನ ಪುಣ್ಯಲಾಭವನ್ನು ಪಡೆದಿರುವುದು ಜೈನ ಧರ್ಮದ ಪರಂಪರೆಯ ದ್ಯೋತಕವಾಗಿದೆ” ಎನ್ನುತ್ತಾ “ಯುವ ಪೀಳಿಗೆಯ ವಿದ್ಯಾರ್ಥಿವೃಂದದವರು ಸಚ್ಛಾರಿತ್ರ್ಯವಂತರಾಗಿ, ಧರ್ಮಾನುರಾಗಿಗಳಾಗಿ ಶೈಕ್ಷಣಿಕ ಪ್ರಗತಿಯತ್ತ ಯಶಸ್ಸು ಗುರಿ ತಲುಪುವಂತಾಗಲಿ. ನಾಗರಿಕರು, ಸೇವಾಕಾಂಕ್ಷಿ ಸತ್ಪ್ರಜೆಗಳು ಭಾರತದ ಸಂಸ್ಕೃತಿಯನ್ನು ಬೆಳೆಸುತ್ತಾ ರಾಷ್ಟçದ ಏಳಿಗೆಯತ್ತ ಕಾಯಾ-ವಾಚಾ-ಮನಸಾ ಕರ್ತವ್ಯ ನಿಷ್ಠೆಯನ್ನು ಹೊಂದುವುದರಿಂದ ವೈಯುಕ್ತಿಕರಾಗಿ ಸುಖ-ಶಾಂತಿ ನೆಲೆಸುತ್ತದೆ” ಎಂದು ಅನುಗ್ರಹ ಪ್ರವಚನ ನೀಡಿದರು.

ಸಕಲ ಜೀವರಾಶಿಗಳಲ್ಲಿ ಮೈತ್ರಿಭಾವವನ್ನು ತೋರಿ, ಪರಿಸರವನ್ನು ಸಂರಕ್ಷಿಸುವ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಲು ಸ್ವಸ್ತಿಶ್ರೀಗಳವರು ತಿಳಿಸಿದರು.

ಆಚಾರ್ಯ ಶ್ರೀ 108 ಅನೇಕಾಂತಸಾಗರ ಮಹಾರಾಜರು, ಸಂಘಸ್ಥ ಮುನಿಶ್ರೀಗಳವರು ಭಕ್ತರನ್ನು ಆಶೀರ್ವದಿಸಿದರು.

ಶ್ರೀಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀಕ್ಷೇತ್ರಪಾಲ ಶ್ರೀ ನಾಗಸನ್ನಿಧಿಯಲ್ಲಿ ಹಾಗೂ ತ್ರಿಕೂಟ ಜಿನಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಶ್ರೀಮಠದ ವಸತಿ ಗೃಹಗಳಲ್ಲಿ, ಅಭೀಷ್ಠ ಪ್ರಸಾದ ಭವನದಲ್ಲಿ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲಾಯಿತು.

Leave a Comment