ರಿಪ್ಪನ್ಪೇಟೆ : ಅವೈಜ್ಞಾನಿಕ ಕಸ್ತೂರಿ ರಂಗನ್ 7ನೇ ಅಧಿಸೂಚನೆಯಿಂದಾಗಿ ಮಲೆನಾಡಿನ ರೈತರ ಬದುಕಿನ ಮೇಲೆ ತೂಗುಗತ್ತಿಯಾಗಿದೆ ಎಂದು ಹೊಸನಗರ ತಾಲ್ಲೂಕು ರೈತ ಸಹಕಾರಿ ವೇದಿಕೆ ಅಧ್ಯಕ್ಷ ವಾಟಗೋಡು ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿ, ತಾಲ್ಲೂಕಿನ ರೈತರು ಸಂಘಟಿತರಾಗಿ ಹೋರಾಟ ನಡೆಸಲು ಮುಂದಾಗುವಂತೆ ಕರೆ ನೀಡಿದರು.
ರಿಪ್ಪನ್ಪೇಟೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟದ ಜೀವ ವೈವಿಧ್ಯ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ ಅರಣ್ಯ ಸಚಿವಾಲಯವು ಕಸ್ತೂರಿ ರಂಗನ ವರದಿಯಂತೆ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಪ್ರದೇಶದಲ್ಲಿ ಹೊಸನಗರ ತಾಲ್ಲೂಕಿನ 126 ಗ್ರಾಮಗಳನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಬಿಡಬೇಕು ಹಾಗೂ ರೈತರ ಬದುಕಿನ ಮೇಲೆ ತೂಗುಗತ್ತಿಯಾಗಿರುವ ಈ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಹೊಸನಗರ ತಾಲ್ಲೂಕು ರೈತ ಸಹಕಾರಿ ವೇದಿಕೆ ಅಧ್ಯಕ್ಷ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಉಪಗ್ರಹ ಆಧಾರಿತ ಸರ್ವೇ ಆಗಿರುವುದರಿಂದ ಅಡಿಕೆ, ತೆಂಗಿನ ತೋಟ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸರ್ಗಿಕ ವಿರೋಧದ ಕ್ರಮವಾಗಿದೆ. ನೈಸರ್ಗಿಕ ಕಾನೂನಿನ ಪ್ರಮಾಣ ಗುರುತಿಸದೇ ಅವೈಜ್ಞಾನಿಕವಾಗಿ ಭೌಗೋಳಿಕ ಕ್ಷೇತ್ರ ವಿಗಂಡಣೆಯಲ್ಲಿ ತಾಂತ್ರಿಕ ವಿಧಾನ ಅನುಸರಿಸದೇ ಇರುವುದು ಘೋಷಿಸಿದ ಗ್ರಾಮದ ನಿರ್ದಿಷ್ಟ ಸರ್ವೇ ನಂಬರ್ ಪ್ರದೇಶ ವ್ಯಾಖ್ಯಾನಿಸದೇ ಇರುವುದು ಅವೈಜ್ಞಾನಿಕ. ಈಗಾಗಲೇ ಪ್ರಕಟಿಸಲಾಗಿರುವ ಪ್ರದೇಶದಲ್ಲಿ ನೈಸರ್ಗಿಕ ಮತ್ತು ಮಾನವ ಮೂಲಸೌಕರ್ಯದ ಮೂಲಭೂತ ಹಕ್ಕುಗಳಾದ ನೀರು ರಸ್ತೆ ಅಭಿವೃದ್ದಿ ಮುಂತಾದ ಹಲವಾರು ಪಾರಂಪರಿಕ ನಾಗರಿಕತೆಯ ಸೌಕರ್ಯ ಅವನತಿಗೆ ಕಾರಣವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹುಂಚ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಯಶಸ್ವತಿ ವೃಷಭರಾಜ್ಜೈನ್, ಜಿಲ್ಲಾ ಕಾಂಗ್ರೆಸ್ ಮುಖಂಡೆ ಗೌರಮ್ಮ, ಆಸಿಫ್ ಭಾಷಾ, ಹೆಚ್.ಎಸ್.ಕೀರ್ತಿರಾಜ್ಗೌಡ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು, ಎಂ.ರಾಜಪ್ಪ ಕೊಳವಂಕ ಇನ್ನಿತರರು ಹಾಜರಿದ್ದರು.

