ರಿಪ್ಪನ್ಪೇಟೆ ; ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಯುವ ಸಮೂಹ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಹೊಂದಿರಬೇಕು ಆಗ ಮಾತ್ರ ಅಪಘಾತಗಳಿಂದ ಉಂಟಾಗುವ ಸಾವು ನೋವುಗಳಿಂದ ಮತ್ತು ಅಪಾಯದಿಂದ ಪಾರಾಗಬಹುದು ಎಂದು ರಿಪ್ಪನ್ಪೇಟೆಯ ನೂತನ ಪಿಎಸ್ಐ ರಾಜು ರೆಡ್ಡಿ ಹೇಳಿದರು.
ಪಟ್ಟಣದ ರೋಟರಿ ಕ್ಲಬ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತೆಯ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಭಾರತದಲ್ಲಿ ಅತಿ ಹೆಚ್ಚು ಸಾವು ನೋವುಗಳು ರಸ್ತೆ ಅಪಘಾತಗಳಿಂದ ಉಂಟಾಗುತ್ತಿದ್ದು ಪ್ರತಿವರ್ಷ ಭಾರತದಲ್ಲಿ 5 ಲಕ್ಷಕ್ಕೂ ಅಧಿಕ ಜನರು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದು ಇದು ವಿಷಾದದ ಸಂಗತಿಯಾಗಿದೆ, ಇದಕ್ಕೆ ಮೂಲ ಕಾರಣ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಇಲ್ಲದೆ ಇರುವುದು, ವಾಹನಗಳನ್ನು ಚಲಾಯಿಸುವಾಗ ಅತಿಯಾದ ವೇಗ, ಮದ್ಯಪಾನವನ್ನು ಮಾಡಿ ವಾಹನವನ್ನು ಚಲಾಯಿಸುವುದು, ವಾಹನಗಳನ್ನು ಚಲಾಯಿಸುವಾಗ ಸರ್ಕಾರವು ಮತ್ತು ರಸ್ತೆ ಸಾರಿಗೆ ಇಲಾಖೆಯವರು ಸೂಚಿಸಿರುವ ನೀತಿ ನಿಯಮಗಳನ್ನು ಅನುಸರಿಸದೇ ಇರುವುದು ವಾಹನಗಳ ಹೆಚ್ಚಿನ ಅಪಘಾತಕ್ಕೆ ಕಾರಣವಾಗಿದೆ.
ಅಪ್ರಾಪ್ತ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಲು ಹೋಗಬಾರದು, ಹಾಗೆಯೇ ಪೋಷಕರು ತಮ್ಮಲ್ಲಿರುವ ವಾಹನಗಳನ್ನು ಅಪ್ರಾಪ್ತ ಮಕ್ಕಳಿಗೆ ಚಲಾಯಿಸಲು ಕೊಡಬಾರದು, ಅಪ್ರಾಪ್ತರು ವಾಹನಗಳನ್ನು ಚಲಾಯಿಸಿದರೆ ಹಾಗೂ ಪೋಷಕರು ತಮ್ಮ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡಿದರೆ ನ್ಯಾಯಾಲಯಗಳು ಭಾರಿ ಮೊತ್ತದ ದಂಡವನ್ನು ವಿಧಿಸುತ್ತದೆ, ಈ ಬಗ್ಗೆ ಅಪ್ರಾಪ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಅರಿವನ್ನು ಹೊಂದಿರಬೇಕು ಎಂದರು.
ಹಾಗೆಯೇ ವಿದ್ಯಾರ್ಥಿಗಳು ಮೊಬೈಲ್ ಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ವಿದ್ಯಾರ್ಥಿಗಳ ಮೊಬೈಲ್ ಗಳಿಗೆ ಅಪರಿಚಿತ ಕರೆಗಳು ಹಾಗೂ ಸಂದೇಶಗಳು ಬಂದಾಗ ಕರೆಗಳನ್ನು ಹಾಗೂ ಸಂದೇಶಗಳನ್ನು ಸ್ವೀಕರಿಸಬಾರದು. ತಮ್ಮ ಮೊಬೈಲ್ ಗಳಿಗೆ ಅಪರಿಚಿತರಿಂದ ಸಂದೇಶಗಳು ಬಂದಾಗ ಆಕಸ್ಮಿಕವಾಗಿ ಸಂದೇಶಗಳನ್ನು ತೆರೆದಾಗ ಕೆಲವೊಮ್ಮೆ ವಿದ್ಯಾರ್ಥಿಗಳ ಬ್ಯಾಂಕ್ನ ಖಾತೆಯಲ್ಲಿರುವ ಎಲ್ಲಾ ಹಣವು ಕ್ಷಣ ಮಾತ್ರದಲ್ಲಿ ಸಂದೇಶಗಳನ್ನು ಕಳಿಸಿದವರ ಖಾತೆಗೆ ವರ್ಗಾವಣೆ ಆಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು.

ರೋಟರಿ ಜಿಲ್ಲಾ 31 82ರ ಅಸಿಸ್ಟೆಂಟ್ ಗವರ್ನರ್ ಹಾಗೂ ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸುರೇಶ್ ಹೆಚ್.ಎಂ ಮಾತನಾಡಿ ಪ್ರಸ್ತುತ ಭಾರತದಲ್ಲಿ ಉಂಟಾಗುತ್ತಿರುವ ರಸ್ತೆ ಅಪಘಾತಗಳಲ್ಲಿ ಯುವ ಸಮೂಹ ಹೆಚ್ಚು ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಅತಿಯಾದ ವೇಗ ಮತ್ತು ಚಾಲನೆಯಲ್ಲಿ ನಿರ್ಲಕ್ಷ್ಯ, ಯಾವುದೇ ಕಾರಣಕ್ಕೂ ಅಪ್ಪ್ತಾಪ್ತರು ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಯುವ ಸಮೂಹ ವಾಹನ ಚಾಲನೆಗೆ ಮುಂದಾಗಬಾರದು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಚಾಲನೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಅರಿವನ್ನು ಹೊಂದಿದರೆ ರಸ್ತೆ ಅಪಘಾತಗಳಿಂದ ಪಾರಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ, ಜಿಲ್ಲಾ 31 82ರ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಎಂ.ಬಿ ಲಕ್ಷ್ಮಣಗೌಡ, ವಲಯ ಸೇನಾನಿ ರಾಧಾಕೃಷ್ಣ ಜೆ, ಕಾಯದರ್ಶಿ ಸಬಾಸ್ಟಿನ್, ಹಾಗೂ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು, ರಿಪ್ಪನ್ಪೇಟೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ರಕ್ಷಣಾ ಇಲಾಖೆಯ ರಾಮಚಂದ್ರ ಇನ್ನಿತರದಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.