ಶಿವಮೊಗ್ಗ ಸುದ್ದಿ ಶಿವಮೊಗ್ಗ

ಶಿವಮೊಗ್ಗಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಡಾ. ಶರಣಪ್ರಕಾಶ ಪಾಟೀಲ್

ಬೆಂಗಳೂರು:ಶಿವಮೊಗ್ಗವನ್ನು ಮಲೆನಾಡು ಪ್ರದೇಶದ ಪ್ರಮುಖ ಪ್ರಾದೇಶಿಕ ಆರೋಗ್ಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.

Read More>>ಸಿಗಂದೂರು ಹೇಳಿಕೆ : ಮಧು ಬಂಗಾರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಚಿವ ಹರತಾಳು ಹಾಲಪ್ಪ

ಬುಧವಾರ ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿ , ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಜೊತೆಗೂಡಿ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್) ಹಾಗೂ ಮೆಗ್ಗಾನ್‌ ಆಸ್ಪತ್ರೆಯ ಮೂಲಸೌಕರ್ಯ ಮತ್ತು ಸೇವಾ ವಿಸ್ತರಣೆ ಕುರಿತು ಸಚಿವರು ಪರಿಶೀಲನೆ ನಡೆಸಿದರು.

ಸಂಪೂರ್ಣ ಆರೋಗ್ಯ ಸೇವೆಗಾಗಿ ನವೀಕರಣೆ

ಈ ಸಭೆಯಲ್ಲಿ, ಶಿವಮೊಗ್ಗ ನಗರವನ್ನು ಪೂರ್ಣ ಪ್ರಮಾಣದ ಪ್ರಾದೇಶಿಕ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಎಲ್ಲವಿಧದ ತಜ್ಞ ವೈದ್ಯಕೀಯ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗಲಿವೆ.

ಮಲೆನಾಡಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ಈ ಕೇಂದ್ರದ ಅಡಿಯಲ್ಲಿ, ವೈದ್ಯಕೀಯ ಕಾಲೇಜುಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಮತ್ತು ವಿವಿಧ ತಜ್ಞ ವಿಭಾಗಗಳೊಂದಿಗೆ ಜಗತ್ತಿನ ಮಟ್ಟದ ಮೂಲಸೌಕರ್ಯವನ್ನು ಹೊಂದಿರುವ ವೈದ್ಯಕೀಯ ಸಂಸ್ಥೆಗಳ ಸಂಕೀರ್ಣ ನಿರ್ಮಾಣವಾಗಲಿದೆ. ಶಿವಮೊಗ್ಗ ಈಗಾಗಲೇ ಉತ್ತಮ ರಸ್ತೆ, ರೈಲು ಹಾಗೂ ವಾಯು ಸಂಪರ್ಕ ಹೊಂದಿರುವುದರಿಂದ ಈ ಯೋಜನೆ ಯಶಸ್ವಿಯಾಗಲು ಅವಕಾಶಗಳಿವೆ ಎಂದು ಸಚಿವರು ವಿವರಿಸಿದರು.

“ಸಿಮ್ಸ್ ಮತ್ತು ಮೆಗ್ಗಾನ್‌ ಆಸ್ಪತ್ರೆಗಳು ಪ್ರಸ್ತುತ ಕಿಕ್ಕಿರಿದು ತುಂಬಿವೆ ಮತ್ತು ವೈದ್ಯರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹೊರೆಯನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಹೊಸ ಸ್ಪೆಷಾಲಿಟಿ ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲು ಹೆಚ್ಚಿನ ಹಣವನ್ನು ಹೂಡುತ್ತೇವೆ” ಎಂದು ಸಚಿವರು ಸ್ಪಷ್ಟಪಡಿಸಿದರು.

“ಕಲಬುರಗಿಯನ್ನು ಕಲ್ಯಾಣ ಕರ್ನಾಟಕದ ಆರೋಗ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸಿದ್ದಂತೆ, ಶಿವಮೊಗ್ಗವನ್ನೂ ಮಲೆನಾಡಿನ ವೈದ್ಯಕೀಯ ಸೇವಾ ಹಬ್ ಆಗಿ ರೂಪಿಸುತ್ತೇವೆ,” ಎಂದು ಡಾ. ಪಾಟೀಲ್ ತಿಳಿಸಿದ್ದಾರೆ.

Leave a Comment