ಹೊಸನಗರ ; ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಸವೆ ಗ್ರಾಮದಲ್ಲಿ ಇತ್ತೀಚೆಗೆ ಬಗರ್ಹಕುಂ ಸಾಗುವಳಿದಾರರ ಅಡಿಕೆ ತೋಟವನ್ನು ನಾಶಗೊಳಿಸಿದ ತಹಸೀಲ್ದಾರ್ ಕ್ರಮವನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ಹಾಗೂ ಕೆಲವು ಸಂಘದ ಕಾರ್ಯಕರ್ತರು ತಾಲೂಕು ಕಛೇರಿ ಆವರಣದಲ್ಲಿ ಬುಧವಾರದಿಂದ ಆರಂಭವಾಗಿರುವ ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು ಆದರೆ ಎರಡು ದಿನಗಳಿಂದ ಉಪವಾಸ ಕುಳಿತಿರುವ ರೈತರ ಸಂಘದ ಸದಸ್ಯರ ವಿಚಾರಣೆಗೆ ಯಾವುದೇ ಜನಪ್ರತಿನಿಧಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬಂದು ಗಮನ ಹರಿಸಿಲ್ಲ ಇವರು ಬುಧವಾರ ರಾತ್ರಿ ಮಳೆ ಚಳಿಯಲ್ಲಿ ತಾಲ್ಲೂಕು ಕಛೇರಿಯ ಎದುರು ಧರಣಿ ನಡೆಸುತ್ತಿದ್ದಾರೆ. ರಾಜಕೀಯ ನಾಯಕರು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡದೇ ಇರುವಂತೆ ಯಾವುದೋ ದೊಡ್ಡ ರಾಜಕೀಯ ನಾಯಕರ ಪಿತೂರಿ ನಡೆದಿದೆ ಎಂದು ರೈತ ಮುಖಂಡ ವಿಠಲ್ ಹೇಳಿದ್ದಾರೆ.
ಧರಣಿಗೆ ಕಾರಣಗಳು ವಸವೆ ಗ್ರಾಮದಲ್ಲಿ ಸುಮಾರು 25 ವರ್ಷಗಳಿಂದ ಕಂದಾಯ ಭೂಮಿಯಲ್ಲಿ ಅನಧಿಕೃತ ಸಾಗುವಳಿಯನ್ನು ತೆರವುಗೊಳಿಸುವ ನೆಪದಲ್ಲಿ ತಹಸೀಲ್ದಾರ್ ಕಾನೂನು ಮೀರಿದ್ದಾರೆ. ಮಾನವೀಯತೆಯನ್ನೂ ಮರೆತು ನಿಯಮಬಾಹಿರವಾಗಿ ತೆರವು ಕಾರ್ಯ ಕೈಗೊಂಡಿದ್ದಾರೆ. ಫಸಲು ಬರುವ ಹಂತದಲ್ಲಿದ್ದ 1600 ಅಡಿಕೆ ಮರಗಳನ್ನು ಜೆಸಿಬಿ ಬಳಸಿ ನಾಶಪಡಿಸಿದ್ದಾರೆ. ತೋಟದಲ್ಲಿದ್ದ ಮನೆಯನ್ನು ನೆಲಸಮ ಮಾಡಿದ್ದಾರೆ. ಕೃಷಿಕರು ಸುಮಾರು 7 ವರ್ಷಗಳ ಹಿಂದೆ ಅಡಿಕೆ ಗಿಡಗಳನ್ನು ನೆಟ್ಟಿದ್ದರು. 5 ಎಕರೆ ಜಾಗದಲ್ಲಿ ಕೈಗೊಂಡಿದ್ದ ಕೃಷಿ ಭೂಮಿಯನ್ನು ಸಕ್ರಮೀಕರಣಗೊಳಿಸಲು ಬಗರ್ಹಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಫಾರಂ 53 ಹಾಗೂ ಫಾರಂ 57 ರಲ್ಲಿ ಅರ್ಜಿಗಳು ಇತ್ಯರ್ಥಗೊಳ್ಳುವ ಮುನ್ನವೇ ಏಕಾಏಕಿ ಅಡಿಕೆ ತೋಟ ಸೇರಿದಂತೆ ಕೃಷಿಭೂಮಿಯನ್ನು ನಾಶಮಾಡಲಾಗಿದೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕೃಷಿಕ ಶ್ರೀಧರ ಅವರಿಗೆ ದಿಕ್ಕಿಲ್ಲದಂತಾಗಿದೆ. ಕನಿಷ್ಟ ರೈತರಿಗೆ ಒಂದು ನೋಟಿಸ್ ಸಹ ಜಾರಿಗೊಳಿಸದೇ ಕ್ರಮ ಕೈಗೊಂಡಿರುವುದು ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಬಗರ್ ಹುಕುಂ ಅರ್ಜಿಯನ್ನು ವಜಾ ಮಾಡಿದ್ದು ನಂತರ ಉಪ ವಿಭಾಗಾಧಿಕಾರಿಗಳು ಬಗರ್ಹುಕುಂ ಅರ್ಜಿಯನ್ನು ವಜಾ ಮಾಡಿದ್ದಾರೆ ಆದರೇ ರೈತ ಶ್ರೀಧರ್ ವಜಾ ಮಾಡಿರುವ ಕ್ರಮ ಸರಿಯಿಲ್ಲ ಎಂದು ಜಿಲ್ಲಾಧಿಕಾರಿಗಳ ನ್ಯಾಯಲಯಕ್ಕೆ ದೂರು ಸಲ್ಲಿಸಲಾಗಿದ್ದು ಜಿಲ್ಲಾಧಿಕಾರಿಗಳ ಆದೇಶ ಬರುವ ಮುಂಚೆಯೇ ಅಡಿಕೆ ಮರಗಳನ್ನು ಕಡಿದು ಹಾಕಿದ್ದು ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರೈತ ಶ್ರೀಧರ್ರಿಗೆ ನಷ್ಟ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಕೃಷಿಕ ಶ್ರೀಧರ ಸೇರಿದಂತೆ ರೈತ ಸಂಘಟನೆಗಳ ಪ್ರಮುಖರಾದ ಸಾಗರದ ತೀ.ನಾ.ಶ್ರೀನಿವಾಸ್, ಮಾಸ್ತಿಕಟ್ಟೆ ರವೀಂದ್ರ, ರಿಪ್ಪನ್ಪೇಟೆ ಸಮಾಜೀಕ ಹೋರಾಟಗಾರ ಕೃಷ್ಣಪ್ಪ, ಜಯರಾಮ ಶೆಟ್ಟಿ, ಮಂದಾರ ವಿಠ್ಠಲ, ಮಂದಾರ ಗಿರೀಶ್ ಮತ್ತಿತರರು ಇದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.