ಹೊಸನಗರ ; ಆಯಾ ಕಾಲಕ್ಕೆ ಅನುಗುಣವಾಗಿ ಮಹಾತ್ಮರ ಜನನ ಆಗುತ್ತದೆ. ಸಮಾಜ ಪರಿವರ್ತನೆಗೆ ಗೌತಮ ಬುದ್ದ ನೀಡಿದ ಕೊಡುಗೆ ಅಪಾರವಾಗಿದ್ದು, ಆತನ ತತ್ವಾದರ್ಶಗಳು ಸರ್ವಕಾಲಿಕ ಸತ್ಯವೇ ಆಗಿದೆ ಎಂದು ವಿಶ್ರಾಂತ ಪ್ರಾಚಾರ್ಯ, ಸಾಹಿತಿ ಡಾ. ಶಾಂತರಾಮ ಪ್ರಭು ತಿಳಿಸಿದರು.
ಪಟ್ಟಣಕ್ಕೆ ಸಮೀಪದ ವರಕೋಡು ಗ್ರಾಮದ ಕೃಷಿಕ ಡಾ. ಅಶೋಕ ಅವರ ಫಾರಂ ಹೌಸ್ ಆವರಣದಲ್ಲಿ ಬುದ್ದ ಪೌರ್ಣಿಮೆ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಾಹಿತ್ಯ ಹುಣ್ಣುಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷರಾದ ಗಣೇಶ್ ಮೂರ್ತಿ ಪ್ರಾಸ್ತಾವಿಕ ಮಾತನಾಡಿ, ಕಳೆದ ಐದು ತಿಂಗಳ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ನಿರಂತರ 25 ಸಾಹಿತ್ಯ ಪೂರಕ ಕಾರ್ಯಕ್ರಮ ಆಯೋಜನೆಗೆ ಸಾಹಿತ್ಯ ಪ್ರೇಮಿಗಳ ಸಹಕಾರವೇ ಕಾರಣವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಕಳೆದ 20 ವರ್ಷಗಳಿಂದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದು ಬರಲು ಜಿಲ್ಲೆಯ ಸಾಹಿತ್ಯಾಸಕ್ತರ ಪ್ರೇರಣೆ ಕಾರಣವೆಂದರು.
ಇದೇ ವೇಳೆ ಗಮಕಿ ಅನುಪಮ ಸುರೇಶ್ ಹಾಗೂ ಡಾ. ಅಶೋಕ ಬುದ್ದನ ಜೀವನ-ಸಾಧನೆ ಕುರಿತು ಗಮಕ ವಾಚಿಸಿದರು. ಕೆಸುವಿನ ಮನೆ ರತ್ನಾಕರ್, ಇಲಿಯಾಸ್, ನವೀನ್ ಕುಮಾರ್ ಶಿವಮೊಗ್ಗ ಕವನ ವಾಚಿಸಿದರು.
ವಸಿಷ್ಠ ಮತ್ತು ಬಾಲಕ ಚೈತನ್ಯ ಕಥೆ ಹೇಳಿದರೆ,
ಕೋರ್ಟ್ ಕಟಕಟೆಯಲ್ಲಿನ ಹಾಸ್ಯ ಪ್ರಸಂಗದ
ನಿಜ ಸಂಗತಿಗಳನ್ನು ವಕೀಲ ಕೆ.ಬಿ ಪ್ರಶಾಂತ್ ತಮ್ಮ ಅನುಭವ ಮೂಲಕ ತಿಳಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ನಿವೃತ್ತ ಶಿಕ್ಷಕ ಕುಬೇಂದ್ರಪ್ಪ ಪ್ರಾರ್ಥಿಸಿದರು.
ಸಾಹಿತಿ ಪ್ರವೀಣ್ ಎಂ ಕಾರ್ಗಡಿ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ನಿರೂಪಿಸಿದರು. ಶಿಕ್ಷಕ ಶಿವಪ್ಪ ವಂದಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ಕೆ.ಜಿ. ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.