ರಿಪ್ಪನ್ಪೇಟೆ : ಕಳೆದ ಎರಡು ವರ್ಷಗಳಿಂದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಶೂನ್ಯ ಬಡ್ಡಿಯ ಸಾಲ ವಿತರಣೆ ಮಾಡಿಲ್ಲ. ₹ 5 ಲಕ್ಷದವರೆಗೆ ಶೂನ್ಯ ಬಡ್ಡಿಯ ಸಾಲ ನೀಡುತ್ತೇವೆಂದು ಸರ್ಕಾರಗಳು ಹೇಳುತ್ತಿದ್ದರು ಈವರೆಗೆ ಶೂನ್ಯ ಬಡ್ಡಿಯ ₹ 5 ಲಕ್ಷದ ಸಾಲ ರೈತರಿಗೆ ಮಂಜೂರಾತಿ ಮಾಡಿಲ್ಲ ಎಂದು ಆಚಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರಾಜು ಆರೋಪಿಸಿದರು.
ರಿಪ್ಪನ್ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 200ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಳೆದೆರಡು ವರ್ಷಗಳಿಂದ ಶೂನ್ಯ ಬಡ್ಡಿ ದರದ ಕೆ.ಸಿ.ಸಿ.ಎಲ್ (ಬೆಳೆ) ಸಾಲ ನೀಡಿರುವುದಿಲ್ಲ. ಪ್ರತಿಯೊಂದು ಸಹಕಾರ ಸಂಘದಲ್ಲಿ ಇನ್ನೂರಕ್ಕೂ ಹೆಚ್ಚು ರೈತರು ಹೊಸ ಸಾಲದ ಅರ್ಜಿಗಳು ಬಂದಿವೆ. ರೈತರು ಸಹಕಾರ ಸಂಘದ ಮುಂದೆ ನಿಂತು 0% ಹೊಸ ಸಾಲ ಹಾಗೂ ಹೆಚ್ಚುವರಿ ಸಾಲಸೌಲಭ್ಯವನ್ನು ಕೇಳುತ್ತಿದ್ದಾರೆ. ಸಹಕಾರ ಸಂಘಗಳು 9% ಬಡ್ಡಿಯ ಎಸ್.ಎ.ಓ ಸಾಲಗಳನ್ನು ಜಿಲ್ಲಾ ಸಹಕಾರ ಬ್ಯಾಂಕ್ನಿಂದ ಪಡೆದು ಕೃಷಿ ಪತ್ತಿನ ಸಹಕಾರ ಸಂಘದ ರೈತರಿಗೆ ಶೂನ್ಯ ಬಡ್ಡಿ ಸಾಲ ನೀಡುವ ದುಸ್ಥಿತಿ ಎದುರಾಗಿದೆ. ಇದರಿಂದ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಮುಚ್ಚುವ ಪರಿಸ್ಥಿತಿ ಬರಲಿದೆ. ಶೂನ್ಯ ಬಡ್ಡಿ ದರದ ಸಾಲದ ಬಗ್ಗೆ ಜಿಲ್ಲಾ ಸಹಕಾರ ಬ್ಯಾಂಕ್ನಲ್ಲಿ ವಿಚಾರಿಸಿದಾಗ ನಬಾರ್ಡ್ ನಿಂದ ಸಾಲ ಬಂದಿರುವುದಿಲ್ಲ ಎಂಬ ಕಾರಣ ಹೇಳುತ್ತಿದ್ದಾರೆ. ಇದರಿಂದ ಸಹಕಾರ ಸಂಘಗಳು ರೈತರಿಗೆ ಯಾವ ಉತ್ತರ ಹೇಳದೆ ಅಸಹಾಯಕ ಪರಿಸ್ಥಿತಿಯಲ್ಲಿವೆ.
ಇನ್ನಾದರೂ ರಾಜ್ಯ ಸರ್ಕಾರ ಕೂಡಲೇ ಡಿಸಿಸಿ ಬ್ಯಾಂಕಿನ ವ್ಯವಸ್ಥೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿಯ ದರದಲ್ಲಿ ಅರ್ಜಿ ಸಲ್ಲಿಸಲಾದ ಹೊಸ ಹಾಗೂ ಹೆಚ್ಚುವರಿ ಕೆಸಿಸಿಎಲ್ ಸಾಲ ನೀಡುವಂತೆ ಆಚಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರಾಜು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಬರೆಯುವ ಮೂಲಕ ಆಗ್ರಹಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





