ರಿಪ್ಪನ್ಪೇಟೆ ; ಬಾಬಾಸಾಹೇಬ ಡಾ.ಅಂಬೇಡ್ಕರ್ ಜನ್ಮ ದಿನದಂದು ಇಲ್ಲಿನ ಗವಟೂರು ಗ್ರಾಮದ ನವ್ಯ ದೇವರಾಜ್ ಎಂಬ ಮಹಿಳೆ ನ್ಯಾಯಕೊಡಿಸುವಂತೆ ಆಗ್ರಹಿಸಿ ರಿಪ್ಪನ್ಪೇಟೆ ಠಾಣೆಯ ಎದುರು ಏಕಾಂಗಿಯಾಗಿ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೆರೆಹಳ್ಳಿ ಹೋಬಳಿ ಗವಟೂರು ಗ್ರಾಮದ ಸ.ನಂ 101 ರಲ್ಲಿ ಭೀಮಣ್ಣ ಬಿನ್ ಪುಟ್ಟಪ್ಪ ಪರಿಶಿಷ್ಟ ಜನಾಂಗದ ರೈತ ಕುಟುಂಬದವರಿಗೆ ಸರ್ಕಾರದ ದರಖಾಸ್ತು ಜಮೀನು ಮಂಜೂರಾಗಿ ಹಕ್ಕು ಪತ್ರವನ್ನು ನೀಡಲಾಗಿದ್ದು ಈ ಜಾಗದಲ್ಲಿ ಮೇಲ್ವರ್ಗದವರು ದಬ್ಬಾಳಿಕೆ ಮಾಡಿ ನಮಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ನಮಗೆ ಅನ್ಯಾಯ ಎಸಗುತ್ತಿದ್ದಾರೆಂದು ಆರೋಪಿಸಿ ಮಹಿಳೆ ನವ್ಯ ದೇವರಾಜ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸುವುದರೊಂದಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಪೊಲೀಸರು ಅನ್ಯಾಯಕ್ಕೊಳಗಾದವರಿಗೆ ರಕ್ಷಣೆ ನೀಡದೆ ಬೇರೆಯವರಿಗೆ ರಕ್ಷಣೆ ನೀಡುವುದರೊಂದಿಗೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆಂದು ಆರೋಪಿಸಿ ಪದೇ ಪದೇ ಠಾಣೆಗೆ ಕರೆಯಿಸುತ್ತಾರೆಂದು ದೂರಿ ಜಮೀನು ಕಂದಾಯ ಇಲಾಖೆಯಿಂದ ಸರ್ವೇ ಮಾಡಿಸಿ ಪೋಡಿ ದುರಸ್ಥಿ ಮಾಡಿಸಿಕೊಳ್ಳಲಿ ಆಗ ಅವರ ಜಾಗವೋ ನಮ್ಮ ಜಾಗವೋ ಗೊತ್ತಾಗುತ್ತದೆಂದು ಪ್ರತಿಭಟನಾ ನಿರತ ಮಹಿಳೆ ನವ್ಯ ದೇವರಾಜ ಹೇಳಿದರು.
ಒಟ್ಟಾರೆ ದಲಿತ ಮಹಿಳೆಯ ಏಕಾಂಗಿ ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ದಲಿತ ಸಂಘರ್ಷ ಸಮಿತಿಯವರು ಬೆಂಬಲವಾಗಿ ಸ್ಥಳಕ್ಕೆ ಧಾವಿಸಿ ಪಿಎಸ್ಐ ರಾಜು ರೆಡ್ಡಿಯವರೊಂದಿಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಮಹಿಳೆಗೆ ನ್ಯಾಯ ಕೊಡಿಸುವ ಭರವಸೆಯಂತೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
ರಿಪ್ಪನ್ಪೇಟೆ ವಿನಾಯಕ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ
ರಿಪ್ಪನ್ಪೇಟೆ ; ವಿಶ್ವಜ್ಞಾನಿ ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಯ ಅಂಗವಾಗಿ ಇಂದು ರಿಪ್ಪನ್ಪೇಟೆಯ ವಿನಾಯಕ ವೃತ್ತದಲ್ಲಿ ಅವರ ಭಾವಚಿತ್ರವನ್ನಿಟ್ಟು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಆರ್.ರಾಘವೇಂದ್ರ ಮಾತನಾಡಿ, ಅಂಬೇಡ್ಕರ್ ಬರಿ ವ್ಯಕ್ತಿಯಲ್ಲ ಅವರೊಂದು ಶಕ್ತಿ. ಸರ್ವರಿಗೂ ಸಮಾನ ಅವಕಾಶ ದೊರೆಯುವಂತೆ ಮಾಡಿದವರು. ಶಿಕ್ಷಣ ಮತ್ತು ಸಂಘಟನೆ ಹಾಗೂ ಹೋರಾಟಗಳನ್ನು ರೂಪಿಸಿಕೊಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂದರು.

ಗ್ರಾಮ ಪಂಚಾಯಿತ್ ನಿಕಟ ಪೂರ್ವ ಸದಸ್ಯ ಪ್ರಕಾಶ್ ಪಾಲೇಕರ್, ಸುಬ್ರಹ್ಮಣ್ಯ ಮತ್ತು ಗ್ರಾಮ ಪಂಚಾಯಿತ್ ನೀರುಗಂಟಿ ಉಮೇಶ ಹಾಗೂ ರಾಜಪ್ಪ, ಸಾವಿತ್ರಮ್ಮ ಇನ್ನಿತರರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





