Lightning Strike | ಸಿಡಿಲು ಬಡಿದು ಓರ್ವ ಸಾವು ! ನಾಲ್ವರಿಗೆ ಗಾಯ

0 118

– ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದಾಗ ನಡೆದ ಅವಘಡ !!

ಕಡೂರು : ಸಿಡಿಲು ಬಡಿದು ಓರ್ವ ಯುವಕ ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಯಗಟಿಪುರ ಗ್ರಾಮದಲ್ಲಿ ನಡೆದಿದೆ.

ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಬಾವಿಕೆರೆಯ ಗಂಜಿಗೆರೆ ಗ್ರಾಮದ ಮುಖೇಶ್ (28) ಮೃತಪಟ್ಟ ಯುವಕ. ಸಂಬಂಧಿಕರ ಮಗುವಿನ ಮಂಡೆ ಹರಕೆ ತೀರಿಸಲು ಯಗಟಿಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಕರ ಜೊತೆಗೆ ಬಂದಿದ್ದ ಮುಖೇಶ್ ದೇವಸ್ಥಾನದವರು ನೀಡಿದ ರೂಮಿನಲ್ಲಿ ಉಳಿದುಕೊಂಡಿದ್ದರು. ದೇವರ ದರ್ಶನ ಪಡೆದ ನಂತರ ಊರಿಗೆ ವಾಪಸ್ಸಾಗಲು ಮುಂದಾದಾಗ ಜೋರಾಗಿ ಮಳೆ ಬಂದಿದೆ. ರೂಮಿನ ಹೊರಗೆ ಕಾಯುತ್ತ ನಿಂತಿದ್ದ ಸಮಯದಲ್ಲಿ ಸಿಡಿಲು ಬಡಿದಿದೆ. ತೀವ್ರ ಅಸ್ವಸ್ಥಗೊಂಡ ಮುಖೇಶ್ ಅವರನ್ನು ಮೊದಲು ಯಗಟಿ ಆಸ್ಪತ್ರೆಗೆ ನಂತರ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಎರಡೂವರೆ ವರ್ಷದ ಹಿಂದೆ ಕಾವ್ಯ ಅವರನ್ನು ಮುಕೇಶ್ ಮದುವೆಯಾಗಿದ್ದರು.

ಮುಖೇಶ್ ಜೊತೆಯಲ್ಲಿದ್ದ ಶೃತಿ ಎಂಬುವವರ ಕಾಲಿಗೂ ಸಿಡಿಲು ಬಡಿದಿದೆ. ಸಂಕೇತ್ ಎಂಬುವವರ ಹೊಟ್ಟೆ ಭಾಗಕ್ಕೆ, ಸುದೀಪ್ ಎಂಬುವರ ದೇಹದ ಕೆಳಭಾಗ ಮತ್ತು ನಾಗಾರ್ಜುನ ಎಂಬುವವರ ದೇಹದ ಎಡಭಾಗಕ್ಕೆ ಸಿಡಿಲು ಬಡಿದು ಗಾಯಗಳಾಗಿವೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದೀಪ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡಿಲಿನ ಹೊಡೆತಕ್ಕೆ ದೇವಸ್ಥಾನದ ವಸತಿ ಗೃಹಗಳ ವಿದ್ಯುತ್ ವಯರ್‌ಗಳು ಸುಟ್ಟು ಹೋಗಿವೆ. ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!