ಹೊಸನಗರ ತಾಲೂಕಿನ ವಿಜಾಪುರ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯವರ ನೇತೃತ್ವದಲ್ಲಿ ವಿಶಿಷ್ಟ ಸಾಮಾಜಿಕ ಸೇವಾ ಕಾರ್ಯಕ್ರಮ ನಡೆಯಿತು. ಸಮಿತಿಯ ಸಮರ್ಪಕ ಯೋಜನೆ ಹಾಗೂ ಗ್ರಾಮಸ್ಥರ ಉತ್ಸಾಹದಿಂದ ನಡೆದ ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಯಿತು.
ಈ ಶಿಬಿರವನ್ನು ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ವಿಜಾಪುರದಲ್ಲಿ ರಕ್ತನಿಧಿ ವಿಭಾಗ ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ ಇವರ ಸಹಯೋಗದಲ್ಲಿ ನಡೆಸಲಾಯಿತು. ಗ್ರಾಮಸ್ಥರ ಸಹಕಾರ ಹಾಗೂ ವೈದ್ಯಕೀಯ ತಂಡದ ನಿಸ್ವಾರ್ಥ ಸೇವೆಯಿಂದ ಶಿಬಿರವು ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಒಟ್ಟು 26 ಯೂನಿಟ್ ರಕ್ತದಾನವನ್ನು ಮಾಡಿದರು. ಗ್ರಾಮಸ್ಥರ ಈ ಉತ್ಸಾಹವನ್ನು ವೈದ್ಯರು ಹಾಗೂ ಸಂಘಟಕರು ಶ್ಲಾಘಿಸಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಲಾಯಿತು.
ಆರೋಗ್ಯ ತಪಾಸಣೆಯ ಭಾಗವಾಗಿ ಹಾಜರಾದ ರಕ್ತದೊತ್ತಡ, ಮಧುಮೇಹ, ಹೆಮೋಗ್ಲೋಬಿನ್, ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ಮಾಡಿಕೊಡಲಾಯಿತು. ವೈದ್ಯಕೀಯ ಸಿಬ್ಬಂದಿ ಗ್ರಾಮಸ್ಥರಿಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅಗತ್ಯ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ಆಯುರ್ವೇದಿಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ್ವರಿ , ವೈದ್ಯರು, ನರ್ಸ್ ಸಿಬ್ಬಂದಿಗಳಿಗೆ ಸಮಿತಿಯವರು ಧನ್ಯವಾದ ಅರ್ಪಿಸಿದರು .
ಈ ಶಿಬಿರವು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಹಾಗೂ ರಕ್ತದಾನದ ಮಹತ್ವವನ್ನು ಸಾರಲು ಮಾದರಿಯಾಗಿದೆ.