ವಿಜೃಂಭಣೆಯೊಂದಿಗೆ ನಡೆದ ಗೋಪೂಜೆ
ರಿಪ್ಪನ್ಪೇಟೆ: ಹಿಂದೂ ವಿಶೇಷ ಹಬ್ಬವಾದ (Festival) ದೀಪಾವಳಿಯಲ್ಲಿ (Deepavali) ಲಕ್ಷ್ಮಿ ಪೂಜೆಯೊಂದಿಗೆ ಗೋಪೂಜೆಯನ್ನು (GoPooje) ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ರಿಪ್ಪನ್ಪೇಟೆಯ (Ripponpet) ವಿವಿಧೆಡೆಯಲ್ಲಿ ಆಚರಿಸಲಾಯಿತು.
ದೀಪಾವಳಿ ಅಮಾವಾಸ್ಯೆಯಂದು ಜಾನುವಾರುಗಳ ಮೈ ತೊಳೆದು ಕೊಟ್ಟಿಗೆಯನ್ನು ಸ್ವಚ್ಚಗೊಳಿಸಿ ತಳಿರು-ತೋರಣಗಳೊಂದಿಗೆ ರಂಗೋಲಿ ಹಾಕಿ ಶೃಂಗರಿಸಲಾಗಿತ್ತು.
ಮಂಗಳವಾರ ಗೋ ಪೂಜೆಯ ದಿನ ಹಾಲು ಕರೆಯುವ ಆಕಳು, ಕರುವನ್ನು ಹೊಸದಾದ ಕಣ್ಣಿ (ಹಸು ಕಟ್ಟುವ ಹಗ್ಗ) ತೊಡಿಸಿ ಮನೆಯ ಜಗಲಿಯ ಮೇಲೆ ಜೇಡಿಮಣ್ಣು ಮತ್ತು ಕೆಮ್ಮಣ್ಣಿನ ತಂಬೊಟ್ಟು ಬರೆದು ರಂಗೋಲಿಯಿಂದ ಅಲಂಕರಿಸಿ ಮನೆಮಂದಿಯಲ್ಲ ಗೋ ಮಾತೆಗೆ ಪೂಜೆ ಸಲ್ಲಿಸುವುರೊಂದಿಗೆ ಪೂಜೆಯ ನಂತರ ಕೊಟ್ಟೆ ಕಡಬು ಮತ್ತು ಚಪ್ಪೆರೆಟ್ಟಿ ಹಾಗೂ ಚೆಂಡುಹೂವಿನ ಹಾರವನ್ನು ಗೋವಿಗಳ ಕೊರಳಿಗೆ ಕಟ್ಟಿ ಹೊರ ಬಿಡುವುದು ವಿಶೇಷವಾಗಿತ್ತು.
ಎತ್ತಿನ ಕೊಂಬಿಗೆ ಬಣ್ಣ ಹಚ್ಚಿ ರಿಬ್ಬನ್ ಕಟ್ಟಿ ಬಣ್ಣ-ಬಣ್ಣ ಜೋಲ್ನೊಂದಿಗೆ ಎತ್ತಿನ ಕೊರಳಿಗೆ ಗಗ್ಗರ, ಘಂಟೆ, ಬಣ್ಣ-ಬಣ್ಣದ ಹಗ್ಗದಿಂದ ಅಲಂಕರಿಸಿ ದೇವಸ್ಥಾನಕ್ಕೆ ರೈತಾಪಿ ವರ್ಗ ಬರುವುದೇ ಒಂದು ವಿಶೇಷವಾಗಿದೆ. ಕೊಟ್ಟಿಗೆಯಿಂದ ಹೊರಬಿಡುವಾಗ ಪಟಾಕಿ ಸಿಡಿಸುತ್ತಿದ್ದಂತೆ ಜಾನುವಾರುಗಳು ಓಡುಸುವುದನ್ನು ಕಂಡು ಸಂತೋಷಪಡುತ್ತಾರೆ.
ಸಂಜೆ ಜಾನುವಾರುಗಳು ಮನೆಗೆ ಮರಳುವಾಗ ಕೊಟ್ಟಿಗೆ ಬಾಗಿಲಿನ ಬಳಿ ಒನಕೆ ಮತ್ತು ಕಸಗುಡಿಸುವ ಪೊರಕೆ ಅಡ್ಡಲಾಗಿ ಹಾಕಿ ಓಕುಳಿ ಸಿಂಪಡಿಸಿ ಕೊಟ್ಟಿಗೆಗೆ ಬಿಡುವುದು ಈ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ದತಿಯನ್ನು ಈಗಲೂ ಆಚರಿಸಿಕೊಂಡು ಬರಲಾಗುತ್ತಿದ್ದೆ.
ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮಮಠದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರು, ರಿಪ್ಪನ್ಪೇಟೆಯ ಸಿದ್ದಿವಿನಾಯಕ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇ. ಚಂದ್ರಶೇಖರ್ ಭಟ್ ಮತ್ತು ಗುರುರಾಜ ಭಟ್ ಅರಸಾಳು ಇವರು ದೇವಸ್ಥಾನ ಧರ್ಮದರ್ಶಿ ಸಮ್ಮುಖದಲ್ಲಿ ಹಾಗೂ ಹಾರೋಹಿತ್ತಲು ರೈತ ಕುಟುಂಬ ನಾಗರತ್ನಮ್ಮ ಸಿದ್ದಪ್ಪಗೌಡ ಮತ್ತು ಮಕ್ಕಳು, ಎಲ್.ವೈ.ದಾನೇಶಪ್ಪ ಕುಟುಂಬವರ್ಗ, ಕೋಡೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಜ್ಯೋತಿ ಚಂದ್ರಮೌಳಿ ಹಾಗೂ ತಾಪಂ ಮಾಜಿ ಸದಸ್ಯ ಚಂದ್ರಮೌಳಿಗೌಡ ಕುಟುಂಬವರ್ಗ ಹಾಗೂ ಆಲವಳ್ಳಿ ಗ್ರಾಮದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಇವರು ಗೋ ಪೂಜೆಯನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.