ಹೊಂಬುಜ ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶರನ್ನವರಾತ್ರಿ ದ್ವಿತೀಯ ದಿನದ ಪೂಜಾ ವಿಧಿ-ವಿಧಾನಗಳು ಜೈನಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಗಳವರ ದಿವ್ಯ ನೇತೃತ್ವ, ಸಾನಿಧ್ಯ ಮತ್ತು ಉಪಸ್ಥಿತಿಯಲ್ಲಿ ಆಗಮೋಕ್ತ ಶಾಸ್ತ್ರದನ್ವಯ ನೆರವೇರಿತು. ಊರ ಪರವೂರ ಭಕ್ತರು ಶ್ರೀ ಭೈರವ ಪದ್ಮಾವತಿ ದೇವಿ ಆರಾಧನೆಯಲ್ಲಿ ಪಾಲ್ಗೊಂಡರು.

“ಶ್ರೀ ಭೈರವ ಪದ್ಮಾವತಿ ಆರಾಧನೆಯಿಂದ ಲೋಕಕಲ್ಯಾಣ ಹಾಗೂ ಭಕ್ತವೃಂದದವರಿಗೆ ಸತ್ಫಲ ಲಭಿಸಲಿ” ಎಂದು ಸ್ವಸ್ತಿಶ್ರೀಗಳವರು ಪ್ರವಚನದಲ್ಲಿ ತಿಳಿಸಿದರು. ಕ್ಲೇಶರಹಿತ ಸಮಾಜ ನಿರ್ಮಾಣವು ಧಾರ್ಮಿಕ ಮನೋಧರ್ಮವನ್ನು ಪ್ರತಿಯೋರ್ವರಲ್ಲಿ ನೆಲೆಗೊಳಿಸುವುದೆಂದರು.
ಬೆಳಗ್ಗೆ ಕುಮುದ್ವತಿ ತೀರ್ಥದಿಂದ ಆಗ್ರೋದಕವನ್ನು ಜಯಘೋಷಗಳೊಂದಿಗೆ ಶ್ರೀಕ್ಷೇತ್ರಕ್ಕೆ ತರಲಾಯಿತು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ಜಿನಸ್ತುತಿ, ವಾದ್ಯಗೋಷ್ಠಿಗಳೊಂದಿಗೆ ಪೂಜೆ, ಪ್ರಾರ್ಥನೆ ಸಮರ್ಪಿಸಲಾಯಿತು. ಸೇವಾಕರ್ತರಾದ ಬೆಂಗಳೂರಿನ ರಶ್ಮಿ ಶ್ರೀ ಪ್ರದೀಪ ಗಂಗವಾಲ್ ಉಪಸ್ಥಿತರಿದ್ದರು.
ಊರ ಪರವೂರ ಭಕ್ತವೃಂದದವರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದವರು ಪೂಜಾ ವಿಧಾನದಲ್ಲಿ ತನ್ಮಯತೆಯಿಂದ ಭಾಗಿಗಳಾದರು. ಪುರೋಹಿತ ಪದ್ಮರಾಜ ಇಂದ್ರ ಸಹ ಪುರೋಹಿತರು ಪೂಜಾಷ್ಟಕಗಳನ್ನು ಸ್ತುತಿಸಿದರು. ರಾತ್ರಿ ಅಷ್ಟಾವಧಾನ, ಸರ್ವವಾದ್ಯಗೋಷ್ಠಿಗಳ ಮೂಲಕ ಪರಂಪರಾನುಗತ ವಿಧಿಗಳು ಜರುಗಿದವು.

ಸೆ.29 ಸೋಮವಾರ-ಸರಸ್ವತಿ ಪೂಜೆ, ಸೆ. 30 ಮಂಗಳವಾರ-ಜೀವದಯಾಷ್ಟಮಿ, ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ. ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.