ಹೊಸನಗರ : ತಾಲೂಕಿನ ಮಾಸ್ತಿಕಟ್ಟೆ ಗ್ರಾಮದ ಅಜೀತ್ ಪ್ರಭು ಅವರಿಗೆ ಯುರೋಪಿನ ನೆದರ್ಲಾಂಡ್ಸ್ ದೇಶದ ಐಂದೊವನ್ ನಗರದ ಶ್ರೀಗಂಧ ಹಾಲ್ಯಾಂಡ್ ಕನ್ನಡ ಬಳಗವು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಯುರೋಪಿನಾದ್ಯಂತ ಕನ್ನಡ ಕಲೆ ಮತ್ತು ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಕನ್ನಡಿಗರನ್ನು ಗುರುತಿಸಿ ಶ್ರೀಗಂಧ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
2025 ರಲ್ಲಿ ಈ ಗೌರವವನ್ನು ಯಕ್ಷಗಾನ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯನ್ನ ಸಲ್ಲಿಸುತ್ತಿರುವ ಅಜೀತ್ ಪ್ರಭು ತಲ್ಲೂರು ಅವರನ್ನ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಅಜೀತ್ ಪ್ರಭು ಮಾಸ್ತಿಕಟ್ಟೆ ಅವರು 2017 ರಿಂದ ಜರ್ಮನಿಯ ಫ್ರ್ಯಾಂಕ್ಫರ್ಟ್ ನಗರದಲ್ಲಿ ನೆಲೆಯಾಗಿದ್ದು. ವೃತ್ತಿಯಲ್ಲಿ ಜರ್ಮನಿಯ ಪ್ರತಿಷ್ಟಿತ ಬ್ಯಾಂಕ್ ಒಂದರಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಗೆಯೇ ವೃತ್ತಿ ಜೀವನದ ಬಿಡುವಿನ ಸಮಯದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಯುರೋಪಿನ ವಿವಿಧ ದೇಶಗಳಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಕಲೆಯ ಪ್ರಚಾರ – ಪ್ರಸಾರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ತಮ್ಮ ಬಿಡುವಿನ ಸಮಯದಲ್ಲಿ 20 ಕ್ಕೂ ಹೆಚ್ಚು ಯಕ್ಷಗಾನ ಆಸಕ್ತರಿಗೆ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿಸಿ ವಿದೇಶದಲ್ಲೂ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಹೊಸನಗರ ತಾಲೂಕಿನ ಯಕ್ಷಗಾನ ಕಲಾ ಪ್ರಿಯರು ಅಭಿನಂದಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





