ಕೃಷಿ ವಿವಿ ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಮುಕ್ತ ಮಕರ ಸಂಕ್ರಾಂತಿ ಆಚರಣೆ
ರಿಪ್ಪನ್ಪೇಟೆ : ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯು ಹಿಂದೂ ಪದ್ದತಿಯ ಪವಿತ್ರ ಹಬ್ಬವಾಗಿದೆ. ಈ ವರ್ಷ ಉತ್ತಮ ಬೆಳೆ ನೀಡಿದಕ್ಕಾಗಿ ಸೂರ್ಯ ದೇವನಿಗೆ ಧನ್ಯವಾದ ಸಲ್ಲಿಸಲು ಜನರು ಸೂರ್ಯನನ್ನು ಪೂಜಿಸಿ ಕೃತಜ್ಞತೆ ಸಲ್ಲಿಸುವ ಹಬ್ಬ. ಇದು ಪ್ರಕೃತಿಯನ್ನು ಶುದ್ಧೀಕರಿಸುತ್ತದೆ ಮತ್ತು ನಮ್ಮ ಪಾಪಗಳನ್ನು ತೊಡೆದುಹಾಕುತ್ತದೆ ಎಂಬ ನಂಬಿಕೆಯಿದೆ. ವಿಭಿನ್ನ ಹೆಸರುಗಳು ಮತ್ತು ಪದ್ಧತಿಗಳೊಂದಿಗೆ ದೇಶದಾದ್ಯಂತ ಆಚರಿಸಲಾಗುತ್ತದೆ.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಗಂಧದ ಗುಡಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೋಡೂರಿನಲ್ಲಿ ಹಳ್ಳಿಯ ಜನರೊಂದಿಗೆ ಎಳ್ಳು ಬೆಲ್ಲವನ್ನು ಕಾಗದದ ಬ್ಯಾಗ್ ಗಳಲ್ಲಿ ವಿತರಿಸಿ ಪ್ಲಾಸ್ಟಿಕ್ ಮುಕ್ತ ಮಕರ ಸಂಕ್ರಾಂತಿಯನ್ನು ಆಚರಿಸಿದರು.
ಎಳ್ಳು ಬೆಲ್ಲವನ್ನು ನೀಡಿ, ಒಳ್ಳೆಯ ಮಾತಾಡಿ ಎಂಬುದು ಸೌಹಾರ್ದತೆಯನ್ನು ಬಿಂಬಿಸುತ್ತದೆ. ‘ನಮ್ಮ ಕ್ರಾಂತಿ, ಪ್ಲಾಸ್ಟಿಕ್ ಮುಕ್ತ ಸಂಕ್ರಾಂತಿ’ ಎಂಬ ಘೋಷವಾಕ್ಯದೊಂದಿಗೆ ಪ್ರತೀ ಮನೆಗಳಿಗೂ ಭೇಟಿ ನೀಡಿ ಸಂಕ್ರಾಂತಿಯ ಶುಭಾಶಯವನ್ನು ಕೋರಿ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮಿಸಲಾಯಿತು.
ಹಬ್ಬದ ಪ್ರಯುಕ್ತ ತಯಾರಿಸಿದ ಸಿಹಿಖಾದ್ಯಗಳನ್ನು ರೈತರು ಇವರಿಗೆ ನೀಡಿ ಸಂಕ್ರಾಂತಿ ಆಚರಣೆಯ ಮಹತ್ವವನ್ನು ಹಂಚಿಕೊಳ್ಳುವುದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಸಂಕ್ರಾಂತಿ ಎಂಬ ವಿದ್ಯಾರ್ಥಿಗಳ ನೂತನ ಆಲೋಚನೆಗೆ ಹರ್ಷ ವ್ಯಕ್ತಪಡಿಸಿದರು.