ಹೊಸನಗರ : ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್ ಪುತ್ರ ಉಲ್ಲಾಸ್ (28) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಲ್ಲಾಸ್ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಗಿರಿಗೆ ಟ್ರಕ್ಕಿಂಗ್ಗೆ ತೆರಳಿದ್ದಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದು ತಕ್ಷಣವೇ ನಗರ ಆಸ್ಪತ್ರೆಗೆ ಕರೆತರಲಾಗಿತ್ತು ನಂತರ ಹೊಸನಗರ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಮೃತ ಉಲ್ಲಾಸ್ ಅವರ ಮದುವೆ ಡಿಸೆಂಬರ್ ತಿಂಗಳಲ್ಲಿ ನಿಶ್ಚಿತವಾಗಿತ್ತು. ಚಂದನಾ ಗೌಡ ಅವರೊಂದಿಗೆ ನಿಶ್ಚಿತಾರ್ಥಗೊಂಡಿದ್ದರು. ಕುಟುಂಬದ ಸಮ್ಮುಖದಲ್ಲಿ ಸರಳವಾಗಿ ದೀಪದ ಶಾಸ್ತ್ರ ನೆರವೇರಿಸಲಾಗಿತ್ತು.

ಕೊಡಚಾದ್ರಿ ಬೆಟ್ಟಕ್ಕೆ ಗೆಳೆಯ ಹಾಗೂ ಸಂಬಂಧಿಯೂ ಆದ ಸುರೇಶ್ ಎಂಬಾತನೊಂದಿಗೆ ಇಂದು ಬೆಳಗ್ಗೆ 6:30ಕ್ಕೆ ಬೆಂಗಳೂರಿನ ಚಾರಣ ಎಂಬ ಸಂಸ್ಥೆಯ ಟಿಟಿ ವಾಹನದಲ್ಲಿ ಪ್ಯಾಕೇಜ್ ಟೂರ್ ಬಂದಿದ್ದು 10 ಗಂಟೆ ಸುಮಾರಿಗೆ ಉಲ್ಲಾಸ್ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ಅವರಿಗೆ ಆ ವೇಳೆ ಹೃದಯಾಘಾತ ಸಂಭವಿಸಿದೆ. ಸದ್ಯ ಮೃತದೇಹವನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

