ಹೊಸನಗರ ; ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್ ಸ್ಥಾಪನೆ ಸಂಬಂಧ ಹೋರಾಟ ತೀವ್ರಗತಿ ಪಡೆಯಬೇಕಿದೆ. ಪ್ರತಿ ಮನೆಯಿಂದಲೂ ಸ್ವಇಚ್ಚೆಯಿಂದ ಪಾಲ್ಗೊಳ್ಳುವ ಮಟ್ಟಿಗೆ ಹೋರಾಟ ಸಮಿತಿಯ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಅವರು ಕ್ಷೇತ್ರ ಪುನರ್ರಚನಾ ಸಮಿತಿಯ ನೂತನ ಕಚೇರಿಯನ್ನು ಗುರುವಾರ ಶುಭಾರಂಭಗೊಳಿಸಿ ಮಾತನಾಡಿ, ನಗರದಿಂದ ಏಪ್ರಿಲ್ 5ರಂದು ಪಾದಯಾತ್ರೆ ಆರಂಭಗೊಳ್ಳಲಿದೆ. ಏಪ್ರಿಲ್ 6 ರಂದು ರಿಪ್ಪನ್ಪೇಟೆಯಲ್ಲಿ ಬೃಹತ್ ಸಭೆ ನಡೆಯಲಿದೆ. ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಡಳಿತ ವ್ಯವಸ್ಥೆಗೆ ಜನರ ಶಕ್ತಿಯನ್ನು ತೋರಿಸಬೇಕಿದೆ. ನಮ್ಮ ಆಗ್ರಹ ಸಂಬಂಧಪಟ್ಟವರಿಗೆ ಮನದಟ್ಟು ಮಾಡಬೇಕು. ಕ್ಷೇತ್ರ ಮಾನ್ಯತೆ ದೊರೆಯುವವರೆಗೂ ಹೋರಾಟ ನಿರಂತರವಾಗಲಿದೆ. ಪಾದಯಾತ್ರೆ ಹಾಗೂ ಸಂಬಂಧಪಟ್ಟ ಸಭೆಗೆ ಅಂದಾಜು 4 ಲಕ್ಷ ರೂ. ವ್ಯಯವಾಗಲಿದ್ದು, ಈ ಬಗ್ಗೆ ಪಾರದರ್ಶಕ ಲೆಕ್ಕಪತ್ರಗಳನ್ನು ಇಡಲಾಗುವುದು ಎಂದರು.
ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಕ್ಷೇತ್ರದ ಹೋರಾಟಕ್ಕಾಗಿ ಒಂದು ತಿಂಗಳ ಅವಧಿಗೆ ಹೊಸ ಕಚೇರಿಯನ್ನು ತೆರೆಯಲಾಗಿದೆ. ಇದರಿಂದ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಅನುಕೂಲವಾಗಲಿದೆ. ಪ್ರತಿ ಗ್ರಾಮ ಪಂಚಾಯಿತಿ ಹಂತದಿಂದಲೂ ಜನರು ಒಗ್ಗೂಡಬೇಕಿದೆ. ಯಾರ ಆಹ್ವಾನಕ್ಕಾಗಿ ಕಾಯುವ ಸಮಯ ಇದಲ್ಲ. ಅಂತಹ ಕಾರ್ಯಕ್ರಮವೂ ಅಲ್ಲ. ಎಲ್ಲರ ಜವಾಬ್ದಾರಿಯಿದೆ ಎಂದರು.
ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ನಾನು ಪ್ರತಿನಿಸಿದ್ದ ಕ್ಷೇತ್ರ ಇಲ್ಲದಿರುವುದು ಅತೀವ ನೋವು ತಂದಿದೆ. 95ರ ತಮ್ಮ ವಯಸ್ಸಿನಲ್ಲಿಯೂ ಪಾದಯಾತ್ರೆಗೆ ಸಿದ್ಧನಿದ್ದೇನೆ. ಮತ್ತೊಮ್ಮೆ ಹೊಸನಗರ ಕ್ಷೇತ್ರ ರಚನೆ ಆಗುವುದನ್ನು ನೋಡುವುದು ತಮ್ಮ ಜೀವನದ ಕೊನೆಯ ಆಸೆಯಾಗಿದೆ ಎಂದರು.
ಪ್ರಮುಖರಾದ ಎನ್.ಆರ್.ದೇವಾನಂದ, ಚಂದ್ರಮೌಳಿಗೌಡ, ಸುರೇಶ್ ಸ್ವಾಮಿರಾವ್, ವೀರೇಶ್ ಆಲವಳ್ಳಿ, ಎಚ್.ಬಿ.ಚಿದಂಬರ, ಸತೀಶ್, ಎ.ವಿ.ಮಲ್ಲಿಕಾರ್ಜುನ ಪೂರ್ಣೇಶ, ಶಾಂತಮೂರ್ತಿ, ಬೃಂದಾವನ ಪ್ರವೀಣ್, ಸದಾಶಿವ ಶ್ರೇಷ್ಠಿ, ಎಂ.ಪಿ ಸುರೇಶ್ ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





