ರಿಪ್ಪನ್ಪೇಟೆ ; ಈ ಹಿಂದೆ ಇದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವುದರೊಂದಿಗೆ ಹಿಂದುಳಿದಿರುವ ಈ ತಾಲ್ಲೂಕು ಅಭಿವೃದ್ದಿಪಡಿಸುವುದು ಸೇರಿದಂತೆ ಹೊಸನಗರ ಕೊಡಚಾದ್ರಿ ರಾಮಚಂದ್ರಪುರ, ನಗರ ಕೋಟೆ ಹೀಗೆ ಹಲವು ಪ್ರವಾಸಿ ಪ್ರೇಕ್ಷಣಿಯ ಸ್ಥಳಗಳಿರುವ ಕ್ಷೇತ್ರದ ಸರ್ವಾಂಗೀಣಾಭಿವೃದ್ದಿಯೊಂದಿಗೆ ಹೆಚ್ಚು ಸಹಕಾರಿಯಾಗುವುದು ಆ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆಯಲು ಏಪ್ರಿಲ್ 6 ರಂದು ನಗರದಿಂದ ಬೃಹತ್ ಪ್ರಮಾಣದಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಕರೆ ನೀಡಿದರು.
ಅವರು ರಿಪ್ಪನ್ಪೇಟೆಯ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾದ ಹೋರಾಟದ ಪೂರ್ವಭಾವಿ ಸಭೆಯ ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಈ ಹಿಂದೆ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ವಿಗಂಡಿಸಿ ಸಾಗರ- ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಹಂಚಲಾಗಿದ್ದು ಆ ಕಾರಣ ಕ್ಷೇತ್ರ ಜನನಾಯಕನಿಲ್ಲದೆ ಬಡವಾಗುವಂತಾಗಿದೆ ಎಂದು ಹೇಳಿ, ಈಗಾಗಲೇ ಮೂರ್ನಾಲ್ಕು ಸಭೆಗಳನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್, ಡಾ.ಜಿ.ಡಿ. ನಾರಾಯಣಪ್ಪ, ಕಿಮ್ಮನೆ ರತ್ನಾಕರ, ಹರತಾಳು ಹಾಲಪ್ಪ, ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಪಕ್ಷಾತೀತವಾಗಿ ಸರ್ವರ ನೇತೃತ್ವದಲ್ಲಿ ಸಭೆಗಳು ನಡೆದು ಕ್ಷೇತ್ರದ ಉಳಿವಿಕೆಗೆ ಸಂಪೂರ್ಣ ಬೆಂಬಲ ವ್ಯಕ್ತಗೊಂಡಿದ್ದು, ಹಾಲಿ ಶಾಸಕರುಗಳಾದ ಗೋಪಾಲಕೃಷ್ಣ ಬೇಳೂರು ಮತ್ತು ಆರಗ ಜ್ಞಾನೇಂದ್ರ ಸಹ ಹೋರಾಟಕ್ಕೆ ಸಹಕಾರ ನೀಡುತ್ತಿದ್ದು ಹೋರಾಟದ ಸ್ವರೂಪದ ಕುರಿತು ಸಾರ್ವಜನಿಕರ ಸಲಹೆ ಸೂಚನೆಗಳ ಕುರಿತು ಬಹಿರಂಗವಾಗಿ ಚರ್ಚಿಸಲಾಯಿತು. ಚರ್ಚೆಯಲ್ಲಿ ಹಲವರು ತಮ್ಮ ಅಭಿಪ್ರಾಯಗಳನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿ ಕನ್ನಡಕ್ಕಾಗಿ ಡಾ.ರಾಜ್ಕುಮಾರ್ ನೇತೃತ್ವದಲ್ಲಿ ನಡೆದಂತಹ ಗೋಕಾಕ್ ಚಳುವಳಿ ಮಾದರಿಯಲ್ಲಿ ಹೊಸನಗರ ಕ್ಷೇತ್ರದ ಉಳಿವಿಕೆಗೆ ಚಳುವಳಿಯ ರೂಪುರೇಷವನ್ನು ಮಾಡಬೇಕು ಕ್ರಾಂತಿಯ ಕಹಳೆ ಮೊಳಗಿಸುವ ಮೂಲಕ ಹೋರಾಟದ ಕಿಚ್ಚು ಹೆಚ್ಚಿಸಬೇಕು ಎಂದರು.

ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ನಾನು ಎಂ.ಎಲ್.ಎ ಸ್ಪರ್ಧೆಗಾಗಿ ಈ ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ನಮ್ಮ ಮುಂದಿನ ಯುವಜನಾಂಗಕ್ಕೆ ಮತ್ತು ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದಾಗಿ ನೇತೃತ್ವ ವಹಿಸಿರುತ್ತೇನೆಂದು ಹೇಳಿ, ಈ ಪಾದಯಾತ್ರೆಗೆ ಗಂಟೆ, ಜಾಗಟೆ, ಶಂಖ, ಕಹಳೆ, ಭಜನೆ, ಡೊಳ್ಳು, ವೀರಗಾಸೆ, ಮಹಿಳೆಯರು, ಮಕ್ಕಳು ಹೀಗೆ ಎಲ್ಲರೂ ಸಕ್ರಿಯರಾಗಿ ಭಾಗವಹಿಸಿ ಸರ್ಕಾರದ ಗಮನಸೆಳೆಯುವ ಪ್ರಯತ್ನವನ್ನು ಮಾಡಲು ತಾಲ್ಲೂಕಿನ ಪ್ರತಿಯೊಂದು ಮನೆಯವರು ಪಾದಯಾತ್ರೆಯಲ್ಲಿ ಭಾಗವಹಿಸಿ ಸಂಘಟನೆಯನ್ನು ಬಲಗೊಳಿಸುವ ಮೂಲಕ ಕಿಚ್ಚಿನ ಕ್ರಾಂತಿಯನ್ನು ಮಾಡೋಣವೆಂದರು.
ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಿಜೆಪಿಯ ಮುಖಂಡ ಎನ್.ಆರ್. ದೇವಾನಂದ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ, ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎನ್.ಸತೀಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್. ವರ್ತೇಶ್, ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಎಂ. ಸುರೇಶ್ ಸಿಂಗ್, ಇನ್ನಿತರ ಹಲವು ಮುಖಂಡರು ಪಾಲ್ಗೊಂಡು ಪಾದೆಯಾತ್ರೆಗೆ ಬೆಂಬಲ ವ್ಯಕ್ತಪಡಿಸುವ ಭರವಸೆ ನೀಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





