ರಿಪ್ಪನ್ಪೇಟೆ : ಕೇಂದ್ರದ ಬಿಜೆಪಿ ಸರ್ಕಾರದವರು ಎಸ್ಐಆರ್ ಮೂಲಕ ಮತದಾರರ ಹಕ್ಕು ಕಸಿಯುವ ಹುನ್ನಾರ ನಡೆಸುತ್ತಿದೆ. ಬಾಂಗ್ಲ ಮತ್ತು ಪಾಕಿಸ್ತಾನದವರ ಅವಶ್ಯಕತೆ ನಮಗಿಲ್ಲ. ಈ ದೇಶದಲ್ಲಿ ಇಷ್ಟು ವರ್ಷ ಇದ್ದರೂ ದಾಖಲೆ ನೀಡುವಂತೆ ಮಾಡುವ ನೀಚ ಪ್ರವೃತ್ತಿಗೆ ಇಳಿದಿರುವುದರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪಡೆಯಲು ಹೋರಾಟ ನಡೆಸಬೇಕಾದಂತಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ರಿಪ್ಪನ್ಪೇಟೆಯ ಎಸ್.ಆರ್.ಕಲ್ಯಾಣ ಮಂದಿರದಲ್ಲಿ ಶನಿವಾರ ಹೊಸನಗರ ಬ್ಲಾಕ್ ಕಾಂಗ್ರಸ್ ವತಿಯಿಂದ ಎಸ್.ಐ.ಆರ್. ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಜನರು ಯಾರು ದಡ್ಡರಲ್ಲ ಎಲ್ಲರು ಪ್ರಜ್ಞಾವಂತರು. ಕಾಂಗ್ರೆಸ್ ಪಕ್ಷ ಧರ್ಮವನ್ನು ಒಡೆಯುವ ಸಂಸ್ಕೃತಿ ಬೆಳೆಸಿಲ್ಲ. ಎಲ್ಲರೂ ಒಂದೇ ಎಂಬ ತತ್ವ ಸಿದ್ದಾಂತದಲ್ಲಿ ಸರ್ವಧರ್ಮೀಯರನ್ನು ಸಮಾನಾವಾಗಿ ಕಂಡುಕೊಂಡು ಬಂದಂತಹ ಪಕ್ಷವೆಂದ ಅವರು, ಈಗಾಗಲೇ ಮತಗಟ್ಟೆ ಆಧಿಕಾರಿಗಳು ಪ್ರತಿ ಮನೆ ಮನೆಗೆ ತೆರಳಿ ಎಸ್ಐಆರ್ ಮತದಾರರ ಪಟ್ಟಿ ಬಿಎಲ್ಓ ಪರಿಷ್ಕರಣೆ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ ಮತದಾರರು ಮನೆಯಲ್ಲಿ ಇಲ್ಲದೆ ಇರುವುದು ಮತ್ತು ಉದ್ಯೋಗ ನಿಮಿತ್ತ ಹೊರ ದೇಶದಲ್ಲಿ ಹೊರ ಜಿಲ್ಲೆಗಳಲ್ಲಿ ಇರಬಹುದು ಅಂತಹವರ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಬಿಎಲ್ಓಗಳೊಂದಿಗೆ ಮನೆಮನೆಗಳಿಗೆ ತೆರಳಿ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೆಚ್ಚು ಮತಗಳನ್ನು ಪಡೆಯಲು ಸಹಕಾರಿಯಾಗುವುದೆಂದ ಅವರು, ಅರ್ಹರೆಲ್ಲರೂ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು. ಅರ್ಹ ನಾಗರೀಕರೆಲ್ಲರನ್ನು ಮತದಾನದ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಹಾಲಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆ ಕಾರಣದಿಂದ ಈ ಅಭಿಯಾನ ನಡೆಸಲಾಗುತ್ತಿದ್ದು ಪ್ರತಿ ಪಕ್ಷದವರು ದುರುದ್ದೇಶದಿಂದ ವಿರೋಧ ಮಾಡಲು ಎಸ್ಐಆರ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅಲ್ಲಲ್ಲ ಕುಳಿತು ಮತದಾರರ ಫಾರಂ ತುಂಬಿಸುವ ಬಗ್ಗೆ ಮಾಹಿತಿಯನ್ನು ನೀಡುತ್ತಿರುವುದರ ಬಗ್ಗೆ ಆರೋಪ ಮಾಡುತ್ತಿದ್ದಾರೆಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರ ಎಸ್ಐಅರ್ ಮೂಲಕ ಮತದಾನದ ಹಕ್ಕು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದ್ದು ಈ ಬಗ್ಗೆ ಜನಜಾಗೃತರಾಗಿರಬೇಕು. ಮನೆ-ಮನೆ ಸಮೀಕ್ಷೆಗೆ ಬರುವ ಬಿಎಲ್ಓಗಳಿಗೆ ಸರಿಯಾದ ಮಾಹಿತಿ ನೀಡಿ ತಮ್ಮ ಮತ ಪಟ್ಟಿಯಲ್ಲಿ ಸರಿಯಾಗಿ ತಮ್ಮ ಹೆಸರು ದಾಖಲಾಗಿರುವ ಬಗ್ಗೆ ದೃಢಪಡಿಸಿಕೊಳ್ಳುವಂತೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ವೇತಾ ಆರ್ ಬಂಡಿ, ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಜಯಶೀಲಪ್ಪಗೌಡ, ಎಂ.ಬಿ.ಲಕ್ಷ್ಮಣಗೌಡ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್, ವಿನಯಕುಮಾರ್, ಬಂಡಿ ರಾಮಚಂದ್ರ, ಎರಗಿ ಉಮೇಶ್, ಅಮ್ಮೀರ್ ಹಂಜಾ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ತಲು,ಇನ್ನಿತರರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





