ಹೊಸನಗರ ತಾಲೂಕಿನ 60ಕ್ಕೂ ಅಧಿಕ ಶಾಲೆಗಳಿಗೆ ಇನ್ನೂ ಪೂರ್ತಿಯಾಗಿ ಸರಬರಾಜಾಗಿಲ್ಲ ಪಠ್ಯಪುಸ್ತಕ ; ಮೊಟ್ಟೆ ಹೊರೆ ಶಿಕ್ಷಕರ ಜೇಬಿಗೆ ಕತ್ತರಿ !

Written by Mahesha Hindlemane

Published on:

ರಿಪ್ಪನ್‌ಪೇಟೆ : ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆ ನೀಗಿಸುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರ 1ನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಮೊಟ್ಟೆ, ಬಾಳೆಹಣ್ಣು ವಿತರಣೆಯಿಂದ ಶಿಕ್ಷಕರು ತಮ್ಮ ಕಿಸೆಯಿಂದ ಹಣ ಹಾಕುವ ಮೂಲಕ ಜೇಬಿಗೆ ಕತ್ತರಿ ಬಿದ್ದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೌದು, ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ 264 ಶಾಲೆಗಳಿದ್ದು ಒಂದರಿಂದ ಎಸ್.ಎಸ್.ಎಲ್.ಸಿ.ವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಯ 13,775 ವಿದ್ಯಾರ್ಥಿಗಳಿಗೆ ವಾರದ ಎರಡು ದಿನ ಸರ್ಕಾರದಿಂದ ಉಚಿತವಾಗಿ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ಯೋಜನೆಗೆ ಶಿಕ್ಷಕವರ್ಗ ತಮ್ಮ ಕಿಸೆಯಿಂದ ಹಣ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ಮೊಟ್ಟೆಯೊಂದಕ್ಕೆ ಸುಲಿಯುವ ಮತ್ತು ಗ್ಯಾಸ್ ವೆಚ್ಚ ಸೇರಿ 6 ರೂಪಾಯಿಗಳನ್ನು ನೀಡಿದರೆ ಮೊಟ್ಟೆಯ ಬೆಲೆ ಈಗ 9 ರಿಂದ 10 ರೂಪಾಯಿಯಾಗಿದ್ದು, ಈ ಬೆಲೆಯಲ್ಲಿ ಖರೀದಿಸಿ ತಂದು ಮಕ್ಕಳಿಗೆ ನೀಡಬೇಕಾಗಿದ್ದು ಇದರಿಂದಾಗಿ ಶಿಕ್ಷಕರು ತಮ್ಮ ಜೇಬಿನಿಂದ ಹೆಚ್ಚುವರಿ ತಲಾ ಒಂದು ಮೊಟ್ಟೆಗೆ 3 ತೆತ್ತಬೇಕಾಗಿದೆ.

ಅಜೀಮ್ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ವಾರದ ನಾಲ್ಕು ದಿನ ಉಚಿತ ಮೊಟ್ಟೆ ಪೊರೈಕೆಯಾದರೆ. ಉಳಿದ ಎರಡು ದಿನ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮೊಟ್ಟೆ ವಿತರಣೆಗಾಗಿ ತಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ತಂದು ವಿತರಣೆ ಮಾಡಬೇಕಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲ ಶಾಲೆಯ ಶಿಕ್ಷಕರು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರ ಮುಂದೆ ಹಂಚಿಕೊಂಡರು.

60ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ಬಂದಿಲ್ಲ !

ಈಗಾಗಲೇ ಶಾಲಾ, ಕಾಲೇಜ್ ಆರಂಭಗೊಂಡು ಎರಡು ತಿಂಗಳು ಕಳೆಯುತ್ತಾ ಬಂದರೂ ಹೊಸನಗರ ತಾಲ್ಲೂಕಿನ 60ಕ್ಕೂ ಅಧಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಇನ್ನೂ ಪೂರ್ತಿಯಾಗಿ ಬಂದಿಲ್ಲ ಎನ್ನಲಾಗಿದೆ. ರಾಜ್ಯ ಸರ್ಕಾರ ಶಾಲೆ ಆರಂಭದ ದಿನವೇ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸರಬರಾಜು ಮಾಡಲಾಗುತ್ತದೆ. ಕೆಲವು ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಪಸ್ತಕ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಧಿಕಾರಿ ವರ್ಗ ಹಾಗೂ ಶಾಲೆಯ ಶಿಕ್ಷಕರುಗಳು ಹೇಳುವಂತೆ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಕೆಲವು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯತ್ತ ಬಂದು ದಾಖಲಾಗುವುದರಿಂದಾಗಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎನ್ನುತ್ತಾರೆ.

ಕಳೆದ ವರ್ಷದ ದಾಖಲಾತಿಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ. ಈಗ ಶಾಲೆ ಪ್ರಾರಂಭಗೊಂಡಿದ್ದು ಕೆಲವು ವಿದ್ಯಾರ್ಥಿಗಳು ಹೊಸದಾಗಿ ಬಂದು ಪ್ರವೇಶ ಪಡೆದ ಕಾರಣ ಮಕ್ಕಳ ಅಂಕಿ ಅಂಶವನ್ನು ತಾಲ್ಲೂಕು ಮಟ್ಟದ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಿ ಅಗತ್ಯ ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಿದರೆ ಆಗ ಸಂಬಂಧಪಟ್ಟ ಅಧಿಕಾರಿವರ್ಗ ತಕ್ಷಣ ಕ್ರಮಕೈಗೊಳ್ಳವ ಮೂಲಕ ಅಕ್ಕ-ಪಕ್ಕದ ಶಾಲೆಗಳಲ್ಲಿ ಹೆಚ್ಚುವರಿ ಪಠ್ಯಪುಸ್ತಕಗಳನ್ನು ಪಡೆದು ವಿತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ ಹೊಸನಗರ ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಂಡಿದ್ದು ಕೊರತೆಯಿರುವ ಪಠ್ಯ ಪುಸ್ತಕವನ್ನು ತಕ್ಷಣವೇ ಸರಬರಾಜು ಮಾಡಲು ಪ್ರಸ್ತಾವನೆ ಕಳುಹಿಸಲಾಗಿದ್ದು ಆದಷ್ಟು ಬೇಗ ಸಮಸ್ಯೆಯಾಗದಂತೆ ಪಠ್ಯಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

Leave a Comment