KADURU ; 2 ವರ್ಷದ ಮಗುವನ್ನು ಮಹಿಳೆಯೊಬ್ಬರು ಕಿಡ್ನ್ಯಾಪ್ ಮಾಡಿದ ಪ್ರಕರಣವೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ಶುಕ್ರವಾರ ನಡೆದಿದ್ದು ಕೊನೆಗೂ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಹೌದು, ಕೊಬ್ಬರಿ ಎಣ್ಣೆ ಗಾಣಕ್ಕೆ ತಂದೆ ಜತೆಗೆ ಬಂದಿದ್ದ ಮಗಳು ಕಾಣೆಯಾಗಿದ್ದ ಪ್ರಕರಣವೊಂದು ನಡೆದಿದ್ದು ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದು ಪ್ರಕರಣ ಸುಖಾಂತ್ಯ ಕಂಡಿದೆ.
ತರೀಕೆರೆ ಠಾಣಾ ವ್ಯಾಪ್ತಿಯ ಬೆಟ್ಟದ ತಾವರೆಕೆರೆ ಗ್ರಾಮದ ಪ್ರಕಾಶ್ ಮತ್ತು ಮೇರಿ ದಂಪತಿಗಳು ಮಗುವನ್ನು ಶುಕ್ರವಾರ ತರೀಕೆರೆ ಪೊಲೀಸ್ ಠಾಣೆ ತಂದು ಒಪ್ಪಿಸಿದ್ದಾರೆ.

ಏನಿದು ಘಟನೆ ?
ಕಡೂರು ತಾಲೂಕಿನ ಯಗಟಿ ಸಮೀಪದ ಸೀತಾಪುರ ಹಟ್ಟಿ ತಾಂಡ್ಯದ ರಘುನಾಯಕ್ ಹಾಗೂ ಮಗಳು ಮಾನಸ ಗುರುವಾರ ಕಡೂರು ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಸಮೀಪದಲ್ಲಿನ ಕೊಬ್ಬರಿ ಎಣ್ಣೆ ಬಿಡಿಸುವ ಗಾಣಕ್ಕೆ ಬಂದಿದ್ದ ವೇಳೆ ಮಗು ನಾಪತ್ತೆಯಾಗಿದ್ದಳು. ಹುಡುಕಾಟ ನಡೆಸಿದ ರಘು ನಾಯಕ್ ಪಕ್ಕದ ಅಂಗಡಿ ಸಿಸಿ ಟಿವಿ ಪರಿಶೀಲಿಸಿದಾಗ ಮಹಿಳೆಯೊಬ್ಬರು ಮಗುವನ್ನು ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು.ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮದ್ಯಪಾನ ಮಾಡಲು ತೆರಳಿದ್ದ ತಂದೆ !
ರಘು ನಾಯಕ್ ಕೊಬ್ಬರಿ ಎಣ್ಣೆ ಗಾಣಕ್ಕೆ ಮಗಳು ಮಾನಸಳೊಂದಿಗೆ ಆಗಮಿಸಿದ್ದು ಮಗುವನ್ನು ಬೈಕ್ ಬಳಿ ಬಿಟ್ಟು ಎಣ್ಣೆ ಗಾಣದಲ್ಲಿ ಕೊಬ್ಬರಿ ಇಡಲು ಹೋಗಿದ್ದು ಮಗುವನ್ನು ಕರೆತಂದಿದ್ದನ್ನು ಮರೆತು ಅಲ್ಲಿಂದ ನೇರವಾಗಿ ಮದ್ಯಪಾನ ಮಾಡಲು ತೆರಳಿದ್ದಾನೆ. ಈ ವೇಳೆ ಮಗು ಅಳುತ್ತಿರುವುದನ್ನು ಗಮನಿಸಿದ ತರೀಕೆರೆ ತಾಲೂಕು ಶಿವಪುರ ಸಮೀಪದ ಚಟ್ನಹಳ್ಳಿ ಗ್ರಾಮದ ಓಂಕಾರಪ್ಪ ಮತ್ತು ದಂಪತಿಗಳು ಮಗುವನ್ನು ಸಂತೈಸಿ ಪೋಷಕರು ಯಾರಾದರೂ ಬರಬಹುದು ಎಂದು ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ. ಯಾರು ಬಾರದಿರುವ ಹಿನ್ನಲೆಯಲ್ಲಿ ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಗ್ರಾಮಕ್ಕೆ ತೆರಳಿದ್ದಾರೆ.

ಸುಖಾಂತ್ಯ ಕಂಡ ಪ್ರಕರಣ :
ಮಗು ನಾಪತ್ತೆಯಾಗಿರುವ ಪ್ರಕರಣ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದ ಬೆಟ್ಟದ ತಾವರೆಕೆರೆ ಗ್ರಾಮದ ಪ್ರಕಾಶ ಮತ್ತು ಮೇರಿ ಮಗುವನ್ನು ತರೀಕೆರೆ ಠಾಣೆಗೆ ಮಗುವನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು ಕಾಣೆ ಪ್ರಕರಣ ಸುಖಾಂತ್ಯ ಕಂಡಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.