ಹೊಸನಗರ: ತಾಲ್ಲೂಕಿನ ವಸವೆ ಗ್ರಾಮದಲ್ಲಿರುವ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 3ರ ಸೋಮವಾರದಿಂದ ಮಾ. 5ರ ಬುಧವಾರದವರೆಗೆ 6ನೇ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ವಸವೆ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾ.4ರ ಬೆಳಿಗ್ಗೆ 10 ಗಂಟೆಯಿಂದ ನಾಗದೇವರಿಗೆ ಆಶ್ಲೇಷ ಬಲಿ ಪೂಜೆ, ಅಮ್ಮನವರಿಗೆ ದುರ್ಗಾ ಹೋಮ, ಮಧ್ಯಾಹ್ನ 12 ಗಂಟೆಗೆ ವನದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಅಭಿಷೇಕ ಹಾಗೂ ಮಂಗಳಾರತಿ ಪೂಜಾ ಕಾರ್ಯಕ್ರಮಗಳಿದ್ದು ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ವಸವೆ ವನದುರ್ಗಾಪರಮೇಶ್ವರಿ ಅಮ್ಮನವರು ಮತ್ತು ರಂಜದಕಟ್ಟೆ ಅಮ್ಮನವರು, ಚೋರಡಿ ಅಮ್ಮನವರು, ಸುತ್ತದ ಅಮ್ಮನವರು ಈ 4 ಅಮ್ಮನವರು ಪಲ್ಲಕ್ಕಿ ಮೂಲಕ ಜಯನಗರದ ಶ್ರೀ ಗುರು ಸಂಜೀವಿನಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಸಂಜೆ 5 ಗಂಟೆಗೆ ವಾದ್ಯಘೋಷ ಹಾಗೂ ವಿಶೇಷ ಸಿಡಿಮದ್ದು ಪ್ರದರ್ಶನಗಳೊಂದಿಗೆ ನಾಲ್ಕು ಅಮ್ಮನವರು ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನಕ್ಕೆ ತಲುಪಿ ಪೂಜೆ ಸಲ್ಲಿಸಿ ನಂತರ ಮೂಲ ಸ್ಥಾನಕ್ಕೆ ತಲುಪಲಿದೆ ಸಂಜೆ 7 ಗಂಟೆಗೆ ಸಾನಿಧ್ಯದಲ್ಲಿ ವಿಶೇಷ ರಂಗಪೂಜೆ ರಾತ್ರಿ 8 ಗಂಟೆಗೆ ವೀರಕಲ್ಲುಕುಟಿಗ ಹಾಗೂ ಅಣ್ಣಪ್ಪ ಪಂಜುರ್ಲಿ ದೈವಗಳ ಆಶೀರ್ವಾಗಳೊಂದಿಗೆ ಕೆಂಡ ಸೇವೆ, ರಾತ್ರಿ 10 ಗಂಟೆಗೆ ದೈವಗಳ ಸಿರಿಸಿಂಗಾರ ಕೋಲಗಳು ನಡೆಯಲಿದ್ದು ಈ ದೇವಸ್ಥಾನದ ಆವರಣದಲ್ಲಿ ಪ್ರತಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕಲ್ಲುಕುಟಿಕ ದೈವದ ಹೇಳಿಕೆಗಳಿದ್ದು ಈ ದೇವಸ್ಥಾನದ ಭಕ್ತಾರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮೂರು ದಿನಗಳ ದೇವತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ವಿಠಲ, ಶಶಿರತ್, ವಿಶ್ವಾಸ್, ವಿನಾಯಕ, ರಾಜೇಶ್, ಸಂಪತ್ತು, ಗಣೇಶ, ನಂದನ್, ಸುರೇಶ, ಹರೀಶ್, ಶರತ್, ಮಹೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.