ರಿಪ್ಪನ್ಪೇಟೆ ; ತ್ಯಾಗ ಮಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಪ್ರತಿಯೊಬ್ಬರೂ ಜಾತಿ ಮತ ಭೇದವಿಲ್ಲದೆ ಪರಸ್ಪರ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಹೊಸನಗರ ವೃತ್ತ ನಿರೀಕ್ಷಕ ಎಂ.ಎಸ್. ಗೌಡಪ್ಪ ಗೌಡರ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಯಾರೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೊಳ್ಳಿವುದು ಅನ್ಯಕೋಮಿನ ವಿರುದ್ಧ ಅವಹೇಳನಕಾರಿ ಸುದ್ದಿಗಳನ್ನು ಹರಿಬಿಡುವುದು ಮತ್ತು ಸಮಾಜದಲ್ಲಿ ಶಾಂತಿಗೆ ಭಂಗ ಉಂಟಾಗುವ ರೀತಿಯಲ್ಲಿ ವರ್ತಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಹಿಂದು ಮುಸ್ಲಿಂ ಭಾಂದವರು ಒಗ್ಗಟ್ಟಾಗಿ ಹೋಗಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯಿಂದ ಎಲ್ಲರೂ ಸೇರಿ ಹಬ್ಬವನ್ನು ಆಚರಿಸಿ ಎಂದು ಹೇಳಿದ ಅವರು, ಮುಂಜಾಗ್ರತ ಕ್ರಮವಾಗಿ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು ಹೋಗಿ ಬರುವಂತಹ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಗೋಹತ್ಯೆ, ಗೋಮಾಂಸ, ಗೋ ಸಾಗಾಣಿಕೆಯನ್ನು ತಡೆಯಲಾಗಿದೆ ಎಂದ ಹೇಳಿದ ಅವರು, ಸಾರ್ವಜನಿಕರು ಕಳ್ಳತನದ ಬಗ್ಗೆ ಠಾಣೆಗೆ ಮಾಹಿತಿ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿ ಇಡುವ ಮೂಲಕ ಕ್ರಮ ಜರುಗಿಸಲಾಗುವುದೆಂದು ಸಿಪಿಐ ಎಂ.ಎಸ್.ಗೌಡಪ್ಪ ಗೌಡರ್ ಹೇಳಿದರು.
ಜುಮ್ಮಾಮಸೀದಿಯ ಅಧ್ಯಕ್ಷ ಹಸನಬ ಹಾಗೂ ಮಕ್ಕಾ ಮಸೀದಿಯ ಅಧ್ಯಕ್ಷರು ಹಾಗೂ ಕೆಂಚನಾಲ-ಗಾಳಿಬೈಲು ಸುತ್ತಮುತ್ತಲಿನ ಮಸೀದಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾ ಅಧ್ಯಕ್ಷ ಸುಧೀರ್, ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ, ರಾಮು ಬಳೆಗಾರ್, ಮುಖಂಡರಾದ ಎಂ.ಬಿ.ಮಂಜುನಾಥ, ಎಂ.ಸುರೇಶ್ ಸಿಂಗ್, ಗ್ರಾಮ ಪಂಚಾಯಿತ್ ನಿಕಟಪೂರ್ವ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಉಬೇದುಲ್ಲ, ಡಿ.ಈ.ಮಧುಸೂದನ್, ಅಸಿಫ್ಭಾಷಾ, ನಿರೂಪ್ ಕುಮಾರ್, ರವೀಂದ್ರ ಕೆರೆಹಳ್ಳಿ, ಎನ್.ವರ್ತೇಶ್ ಹಾಗೂ ಪ್ರೋಬೆಷನರಿ ಪಿ.ಎಸ್.ಐ ಇನ್ನಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಿನಾಯಕ ವೃತ್ತದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗಿದ್ದು ನಾಲ್ಕು ಜಿಲ್ಲಾ, ತಾಲ್ಲೂಕು ಕೇಂದ್ರಗಳನ್ನು ಸಂಪರ್ಕಿಸುವ ಹೃದಯ ಭಾಗದಂತಿರುವ ರಸ್ತೆ ಸಂಪರ್ಕದಲ್ಲಿ ವಾಹನಗಳಿಗೆ ವೇಗದ ಮಿತಿ ಅಳವಡಿಸಿ ಇಲ್ಲವೇ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ಎಂದು ಪತ್ರಕರ್ತರು ಸಲಹೆ ನೀಡಿದರು.
ಠಾಣೆಯ ಪಿಎಸ್ಐ ರಾಜುರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುವ ಮೂಲಕ ಸ್ವಾಗತಿಸಿ, ವಂದಿಸಿದರು.

