ಶಿವಮೊಗ್ಗ: ಅವಕಾಶ ಸಿಕ್ಕರೆ ಮೆಕ್ಕಾಗೆ ಹೋಗುವುದಾಗಿ ಸಚಿವ ಬಸವರಾಜ ರಾಯರೆಡ್ಡಿ ನೀಡಿರುವ ಹೇಳಿಕೆಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಅಚ್ಚರಿ ಮೂಡಿಸುವುದಿಲ್ಲ. ಇದು ಓಲೈಕೆ ರಾಜಕಾರಣದ ಮುಂದುವರಿದ ಭಾಗ ಎಂದು ಟೀಕಿಸಿದರು.
“ಅವರಿಗೆ ಮೆಕ್ಕಾಗೆ ಹೋಗುವ ಆಸೆಯಿದ್ದರೆ ಹೋಗಿ ಬರಲಿ. ಅದನ್ನು ಬಹಿರಂಗವಾಗಿ ಹೇಳುವ ಅಗತ್ಯವಿಲ್ಲ. ಅದೇ ರೀತಿ ಹಿಂದೂ ಧರ್ಮದ ವಿಚಾರದಲ್ಲೂ ಅನಗತ್ಯವಾಗಿ ಮಾತನಾಡುವ ಅವಶ್ಯಕತೆ ಇಲ್ಲ” ಎಂದು ಚನ್ನಬಸಪ್ಪ ಹೇಳಿದರು.
ಮೆಕ್ಕಾ ಬಗ್ಗೆ ಮಾತನಾಡುವ ರಾಯರೆಡ್ಡಿ ಅವರು ಅಯೋಧ್ಯೆ, ಮಥುರಾ ಮತ್ತು ಕಾಶಿ ಮುಂತಾದ ಧಾರ್ಮಿಕ ಕ್ಷೇತ್ರಗಳ ಬಗ್ಗೆಯೂ ಮಾತನಾಡಲಿ. ಒಂದು ಧರ್ಮದ ಹೆಸರಿನಲ್ಲಿ ರಾಜಕೀಯ ಓಲೈಕೆ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ತಾವು ಯಾವುದೇ ಸಮುದಾಯದ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಚನ್ನಬಸಪ್ಪ, “ನನಗೂ ಮುಸ್ಲಿಂ ಸಮುದಾಯದಲ್ಲಿ ಆತ್ಮೀಯ ಸ್ನೇಹಿತರಿದ್ದಾರೆ. ಆದರೆ ಸಚಿವ ಸ್ಥಾನದಲ್ಲಿರುವವರು ಒಂದು ಧರ್ಮವನ್ನು ಓಲೈಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಈ ರೀತಿಯ ಹೇಳಿಕೆ ಯಾವ ಪಕ್ಷದವರಿಂದ ಬಂದರೂ ಅದು ತಪ್ಪೇ” ಎಂದರು.
ಈ ಹಿಂದೆ ಭದ್ರಾವತಿ ಶಾಸಕ ಸಂಗಮೇಶ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಈಗ ಸಚಿವ ಬಸವರಾಜ ರಾಯರೆಡ್ಡಿ ಕೂಡ ಅದೇ ಹಾದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಚನ್ನಬಸಪ್ಪ ಟೀಕಿಸಿದರು.
ಧಾರ್ಮಿಕ ವಿಚಾರಗಳನ್ನು ರಾಜಕೀಯ ಹೇಳಿಕೆಗಳಾಗಿ ಬಳಸುವುದರಿಂದ ಸಮಾಜದಲ್ಲಿ ಅನಗತ್ಯ ಚರ್ಚೆ ಮತ್ತು ಗೊಂದಲ ಉಂಟಾಗುತ್ತದೆ. ಸಾರ್ವಜನಿಕ ಜೀವನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಅವರು ಹೇಳಿದರು.

