ಅರಣ್ಯ ಇಲಾಖೆ ಸಿಬ್ಬಂದಿ ಬೆಳೆ ನಾಶ ಆರೋಪ
ಕಳಸ : ಇಡಕಣಿ ಗ್ರಾಮದ ಹೆಮ್ಮಕ್ಕಿಯ ಸುಕನಕೊಳಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ತೋಟದಲ್ಲಿ ಗಿಡ ಕಡಿದು ಬೆಳೆಹಾನಿ ಉಂಟು ಮಾಡಿದ್ದಾರೆ ಎಂದು ಕೃಷಿಕ ಅಣ್ಣಪ್ಪ ಎಂಬುವರು ದೂರಿದ್ದಾರೆ.
ಪರಿಶಿಷ್ಟ ಸಮುದಾಯ ನಾನು ಸರ್ವೆ ನಂಬರ್ 89ರಲ್ಲಿ 1 ಎಕರೆಯಲ್ಲಿ ಹಲವು ವರ್ಷಗಳಿಂದ ಕಾಫಿ, ಕಾಳುಮೆಣಸು ಕೃಷಿ ಮಾಡುತ್ತಿದ್ದೇನೆ. ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ನಮ್ಮ ತೋಟಕ್ಕೆ ನುಗ್ಗಿ 500 ಕಾಫಿ ಗಿಡ ಕಡಿದಿದ್ದಾರೆ. 100ಕ್ಕೂ ಹೆಚ್ಚು ಕಾಳುಮೆಣಸಿನ ಬಳ್ಳಿಗಳನ್ನು ಕೂಡ ಕಿತ್ತಿದ್ದಾರೆ ಎಂದು ಅಣ್ಣಪ್ಪ ಆರೋಪಿಸಿದ್ದಾರೆ.
ನಮ್ಮ ಊರಿನ 10 ಕುಟುಂಬಗಳಿಗೆ 40 ವರ್ಷಗಳ ಹಿಂದೆಯೇ ತಲಾ 1 ಎಕರೆ ಭೂಮಿ ಮಂಜೂರಾಗಿದೆ. ಆದರೆ, ಈಗ ಯಾವುದೇ ನೋಟಿಸ್ ನೀಡದೆ ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ತೋಟ ನಾಶ ಮಾಡಿದ್ದಾರೆ ಅವರು ಆರೋಪಿಸಿದ್ದಾರೆ.
ತೆರವು ಮಾಡಿರುವ ಪ್ರದೇಶ ಸೆಕ್ಷನ್ 17ರ ಅನ್ವಯ ಇಡಕಣಿ ಮೀಸಲು ಅರಣ್ಯವಾಗಿದ್ದು ಈ ಬಾರಿ ಹೊಸದಾಗಿ ಒತ್ತುವರಿ ಮಾಡಲಾಗಿದೆ. ಅವರಿಗೆ ಮಂಜೂರಾಗಿದ್ದ ಜಾಗ ಬೇರೆಯೇ ಇದ್ದು ಅಲ್ಲಿ ತೋಟ ಇದೆ. ಇಲ್ಲಿ ಕಡಿದ ಗಿಡಗಳು ಕಾಫಿಯ ಕಾಡು ಗಿಡಗಳೇ ಹೊರತು ಇವರು ಬೆಳೆಸಿದ ಗಿಡಗಳಲ್ಲ ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ತಿಳಿಸಿದರು.