ಸರ್ಕಾರಿ ಶಾಲೆಯ ದುಸ್ಥಿತಿ ; ಗಿಡಗಂಟಿಗಳಿಂದ ಮುಚ್ಚಿಕೊಂಡಿರುವ ಬಾಗಿಲಿಲ್ಲದ ಬಾಲಕಿಯರ ಶೌಚಾಲಯ !
ರಿಪ್ಪನ್ಪೇಟೆ: ಸ್ವಚ್ಚ ಭಾರತ ಎಂಬ ಘೋಷಣೆಯಲ್ಲಿ ಅರಸಾಳು ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಳಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಾಲಕಿಯರ ಶೌಚಾಲಯಕ್ಕೆ ಬಾಗಿಲಿಲ್ಲದೆ ಗಿಡಗಂಟಿಗಳಿಂದ ಮುಚ್ಚಿಕೊಂಡು ಶೌಚಾಲಯಕ್ಕೆ ದಾರಿಯೂ ಇಲ್ಲದೆ ಹುಡುಕುವ ಸ್ಥಿತಿಯಲ್ಲಿ ಬಾಲಕಿಯರು ಮತ್ತು ಬಾಲಕರ ಶೌಚಾಲಯಕ್ಕೆ ಹೋಗಿ ವಾಪಾಸ್ಸು ಬರುವವರೆಗೂ ಕಾಯುವ ಸ್ಥಿತಿ ಎದುರಾಗಿದೆ ಎಂದು ಪೋಷಕರು ತಮ್ಮ ಮನದ ನೋವನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದರು.
ಕಳೆದ ಐದಾರು ವರ್ಷದ ಹಿಂದೆ ತಮ್ಮಡಿಕೊಪ್ಪ ಗ್ರಾಮದ ಅಕಾಶಮಕ್ಕಿ ಅಂಗನವಾಡಿಯಲ್ಲಿ ಮಗುವೊಂದು ಅಕಸ್ಮಿಕವಾಗಿ ಹಾವು ಕಚ್ಚಿ ಸಾವನ್ನಪ್ಪಿರುವ ವಿಷಯ ಇನ್ನೂ ಜನಮಾನಸದಲ್ಲಿ ಮಾಸುವ ಮುನ್ನವೇ ತಮ್ಮಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ನಿರ್ಮಿಸಲಾಗಿರುವ ಬಾಲಕ-ಬಾಲಕಿಯರ ಶೌಚಾಲಯಕ್ಕೆ ಗುತ್ತಿಗೆದಾರ ಬಾಗಿಲು ಅಳವಡಿಸದೆ ಇದ್ದು ಇನ್ನೂ ಈ ಶೌಚಾಲಯದ ಬಳಿಯಲ್ಲಿ ಗಿಡ-ಗಂಟಿ ಬೆಳೆದು ಸಂಪೂರ್ಣವಾಗಿ ಶೌಚಾಲಯ ಮುಚ್ಚಿಕೊಂಡಿದ್ದು ದಾರಿ ಸಹ ಇಲ್ಲದೆ ಹಾವು ಹುಳ ಹಪ್ಪಡೆಗಳು ಎಲ್ಲಿ ಸೇರಿಕೊಂಡಿವೆಯೋ ಎಂಬ ಭಯದಲ್ಲಿ ಬಾಲಕಿಯರು ಮತ್ತು ಬಾಲಕರು ಶೌಚಾಲಯಕ್ಕೆ ಹೋಗುವಂತಾಗಿದೆ.
ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದ್ದರೂ ಕೂಡಾ ಪ್ಲಾನ್ ಆಂಡ್ ಎಸ್ಟಿಮೆಂಟ್ನಲ್ಲಿ ಈ ಶೌಚಾಲಯಕ್ಕೆ ಬಾಗಿಲು ಅಳವಡಿಸದೇ ಇರುವುದು ನೋಡಿ ಮಕ್ಕಳು ಹಿಡಿಶಾಪ ಹಾಕುವಂತಾಗಿದ್ದರೂ ಕೂಡಾ ಸಂಬಂಧಪಟ್ಟ ಅರಸಾಳು ಗ್ರಾಮ ಪಂಚಾಯ್ತಿಯವರು ತಮಗೇನು ಗೊತ್ತಿಲ್ಲದವರಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಶಾಲಾ ಮುಖ್ಯೋಪಾಧ್ಯಾಯರು ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂಬ ಉದ್ದೇಶದಿಂದ ಪೋಷಕರು ದಿಢೀರ್ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ವರದಿಗಾಗಿ ತೆರಳಿದ ಮಾಧ್ಯಮದವರಿಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಮತ್ತು ಇತರರು ಈ ದುರಾವಸ್ಥೆಯ ಶೌಚಾಲಯದ ಬಳಿ ಪ್ರತ್ಯಕ್ಷವಾಗಿ ತೋರಿಸಿ ಹೀಗೋಂದು ಶೌಚಾಲಯ ನಿರ್ಮಿಸಿದ್ದಾರೆ ನಮ್ಮ ಹೆಣ್ಣುಮಕ್ಕಳು ಹೇಗೆ ಈ ಶೌಚಾಲಯಕ್ಕೆ ಹೋಗಬೇಕು ಸ್ವಾಮಿ ಹೇಳಿ ಎಂದು ತಮ್ಮ ಮಕ್ಕಳ ನೋವಿನ ಕಥೆಯನ್ನು ಬಿಡಿಸಿಟ್ಟರು.