30 ಅಡಿ ಆಳದ ಬಾವಿಗೆ ಹಾರಿದರು ಜೀವಂತವಾಗಿ ಮೇಲೆ ಬಂದ ಯಶೋದಮ್ಮಳ ಯಶೋಗಾಥೆ
ಹೊಸನಗರ : ಪಟ್ಟಣದ ಹೊರವಲಯ ಮಾವಿನಕೊಪ್ಪದ ನಿವಾಸಿ ಯಶೋದಮ್ಮ (62) ಎಂಬುವರು ಶುಕ್ರವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ತಮ್ಮ ಮನೆಯ ಹಿಂದಿನ ಬಾವಿಗೆ ಹಾರಿದ್ದು ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳ ಬಾವಿಯಿಂದ ಸಾಹಸದಿಂದ ಮೇಲೆ ಎತ್ತಿ ಪುನರ್ಜನ್ಮ ನೀಡಿದ ಘಟನೆ ಸಂಭವಿಸಿದೆ.
ಯಶೋದಮ್ಮ ಮಾನಸಿಕವಾಗಿ ದುರ್ಬಲರಾಗಿದ್ದು ಮನೆಯಲ್ಲಿ ಸೊಸೆ ಮತ್ತು ಮೊಮ್ಮಕ್ಕಳ ಮಾತ್ರ ಇದ್ದಿದ್ದು ಮನೆಯಲ್ಲಿ ಅತ್ತೆ ಕಾಣದಾದಾಗ ಸೊಸೆ ಮನೆ ಹಿಂಭಾಗವೆಲ್ಲ ಹುಡುಕಿ ಮನೆ ಹಿಂಭಾಗದ ಬಾವಿಗೆ ಮುಚ್ಚಿದ ಕಬ್ಬಿಣದ ಗ್ರಿಲ್ ತೆರೆದಿದ್ದನ್ನು ಕಂಡ ಸೊಸೆ ಬಾವಿ ಬಗ್ಗಿ ನೋಡಿದಾಗ ಅತ್ತೆ ಯಶೋದಮ್ಮ ಬಾವಿಯೊಳಗೆ ಪೈಪ್ ಹಿಡಿದು ನಿಂತಿರುವುದ ಕಂಡು ಭಯಭೀತರಾಗಿ ಆಸುಪಾಸಿನವರನ್ನು ಕೂಗಿ ಕರೆದಿದ್ದು ನಂತರ ತಕ್ಷಣ ಅಗ್ನಿಶಾಮಕದಳಕ್ಕೆ ಫೋನು ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಯಶೋದಮ್ಮನನ್ನು ಸಾಹಸದಿಂದ ಮೇಲಕ್ಕೆತ್ತಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಗ್ಗೆ ತಿಳಿದು ಬಂದಿದೆ.
ಈ ಹಿಂದೆ ಯಶೋದಮ್ಮನ ಪತಿ ದಿನಸಿ ವ್ಯಾಪಾರಿ ಶಂಕರನಾರಾಯಣ ಶೇಟ್ ರವರು ಸಹ ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಕೆ.ಟಿ ರಾಜಪ್ಪ, ಎಚ್.ಡಿ ಸುರೇಶ, ಕೆ. ರವೀಂದ್ರ, ಶಂಕರೇಗೌಡ ಹಾನಗಳ್ಳಿ, ಬಿ.ಸಿ ಆಂಜನೇಯ, ಭೀಷ್ಮಚಾರಿ ಕಮ್ಮಾರ್, ಆರ್. ಮಣಿ ಮತ್ತಿತರರು ಯಶೋದಮ್ಮನನ್ನು ಉಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.