ಪ್ರೇಮಿ ಜೊತೆಯಿರಲು ಪತಿಯನ್ನೇ ಕೊಂದ ಪತ್ನಿ !
ಕಡೂರು : ಪ್ರೇಮಿ ಜೊತೆಯಿರಲು ಅಡ್ಡಗಾಲಾಗುತ್ತಿದ್ದ ಪತಿಯನ್ನು ಪ್ರೇಮಿ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿದ ಘಟನೆ ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.
ನವೀನ್ (28) ಪತ್ನಿ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ಪತಿ. ಪತ್ನಿ ಪಾವನ ಹಾಗೂ ಆಕೆಯ ಪ್ರೇಮಿ ಸಂಜಯ್ ಕೊಲೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ.
ನವೀನ್ ಅವರ ಮೃತದೇಹ ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನವೀನ್ ಪೋಷಕರು ನೀಡಿದ ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯೇ ಪತಿಯನ್ನು ಕೊಂದಿರುವುದಾಗಿ ತನಿಖೆಯಲ್ಲಿ ಪಾವನ ಹಾಗೂ ಸಂಜಯ್ ಬಾಯ್ಬಿಟ್ಟಿದ್ದಾರೆ.
ಪ್ರೇಮಿ ಜೊತೆ ಇರಲು ಅಡ್ಡಗಾಲಾಗುತ್ತಿದ್ದ ಪತಿಗೆ ಪಾವನ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಪತಿಯ ಜ್ಞಾನ ತಪ್ಪಿಸುತ್ತಾಳೆ. ಬಳಿಕ ಪತಿಯನ್ನು ಪ್ರೇಮಿಯ ಜೊತೆ ಬೈಕ್ ನಲ್ಲಿ ತಂದು ಕೆರೆಗೆ ಎಸೆದಿದ್ದರು ಎನ್ನಲಾಗಿದೆ.
ಘಟನೆ ಹಿನ್ನೆಲೆ :
ಕಳೆದ 6 ವರ್ಷಗಳ ಹಿಂದೆ ನವೀನ್ ಕುಮಾರ್ ಜೊತೆ ಪಾವನ ಮದುವೆಯಾಗಿ 4 ವರ್ಷದ ಹೆಣ್ಣು ಮಗುವಿದೆ. ಆದರೆ ಪತ್ನಿ ಪಾವನ ಮತ್ತು ಪ್ರಿಯಕರ ಸಂಜು ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು. ತಮ್ಮ ಪ್ರೀತಿಗೆ ಗಂಡ ನವೀನ್ ಅಡ್ಡಿಯಾಗಿದ್ದರಿಂದ ಪ್ರಿಯಕರನ ಜೊತೆಗೂಡಿ ನಿದ್ದೆ ಮಾತ್ರೆಯನ್ನು ನೀರಿನಲ್ಲಿ ಕರಗಿಸಿ ಚಪಾತಿ ಹಿಟ್ಟಿಗೆ ಬೆರೆಸಿ ಊಟದ ಬಳಿಕ ನಿದ್ದೆ ಮಂಪರಿಗೆ ಜಾರಿದ ಬಳಿಕ ಸಿನಿಮೀಯ ಶೈಲಿಯಲ್ಲಿ ಪತಿಯನ್ನು ಪ್ರಿಯಕರನ ಬೈಕಿನಲ್ಲಿ ತಂದು ಯಗಟಿ ಸಮೀಪದ ಕೆರೆಯ ದೊಡ್ಡಗುಂಡಿಗೆ ಎಸೆದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾರೆ.
ಕೆರೆಯ ಬಳಿ ಪತ್ತೆಯಾದ ಬೈಕ್, ಬ್ಯಾಟರಿ, ಚಪ್ಪಲಿಗಳು ಹಾಗೂ ಮೃತ ನವೀನ್ ಕುಮಾರ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ನಂತರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ್ದು ವರದಿ ಬಂದ ನಂತರ ತನಿಖೆಯ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡ ಬಳಿಕ ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಶನಿವಾರದಂದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದರು.