ಶಿವಮೊಗ್ಗ:ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಈಡಿಗ ಭವನದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ “ಸಮೀಕ್ಷೆಯಲ್ಲಿ ಬರೆಯಬೇಕಾದ ಹೆಸರು ಈಡಿಗ ಅಥವಾ ದೀವರ ” ಎಂಬ ಪ್ರಶ್ನೆಯ ಕುರಿತಾಗಿ ಸುದೀರ್ಘ ಚರ್ಚೆ ನಡೆಯಿತು.
ಶಾಸಕರು–ಸಚಿವರ ಗೈರುಹಾಜರಿ
ಸಭೆಗೆ ಶಾಸಕ, ಸಚಿವರು ಅನಾರೋಗ್ಯ ಹಾಗೂ ವಿಧಾನಸಭಾ ಅಧಿವೇಶನದ ಕಾರಣದಿಂದ ಹಾಜರಾಗದಿದ್ದರೆ, ಮಾಜಿ ಶಾಸಕ ಡಾ.G D ನಾರಾಯಣಪ್ಪ ಮಾತ್ರ ಉಪಸ್ಥಿತರಿದ್ದರು. ಆದರೆ, ಸಮುದಾಯದ ಮುಖಂಡರಾದ ಕುಮಾರ ಬಂಗಾರಪ್ಪ ಮತ್ತು ಹರತಾಳು ಹಾಲಪ್ಪ ಸಭೆಗೆ ಗೈರಾಗಿದ್ದರು.
ಸಮೀಕ್ಷೆ ಮತ್ತು ಜಾತಿಗಣತಿ ಗೊಂದಲ
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಧರ್ಮರಾಜ್ ಅವರು, “ಸಮೀಕ್ಷೆ ಬೇರೆ, ಜಾತಿಗಣತಿ ಬೇರೆ. ಸದಾಶಿವ ಆಯೋಗದಲ್ಲಿ 1350 ಜಾತಿಗಳನ್ನು ಸೇರಿಸಲಾಗಿತ್ತು, ಈಗ 1400 ಜಾತಿಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈಡಿಗ, ಪೂಜಾರಿ, ಬಿಲ್ಲವಾ, ದೀವರು ಎಂಬ ಹೆಸರುಗಳನ್ನೂ ನೀಡಲಾಗಿದೆ” ಎಂದು ತಿಳಿಸಿದರು.“ಈ ಹಿಂದೆ ಕೋಡ್ ನಂಬರ್ಗಳು ಬೇರೆ ಇದ್ದವು. ಈಗ ಬದಲಾಗಿದೆ. ಜಾತಿ ಮತ್ತು ಉಪಜಾತಿ ಎರಡೂ ಕಾಲಂಗಳಲ್ಲಿ ಒಂದೇ ಜಾತಿಯನ್ನೇ ಬರೆಯಿಸಬಹುದು. ಈಡಿಗ ಎಂದು ಬರೆಯಿಸಿದರೂ, ದೀವರು ಎಂದು ಬರೆಯಿಸಿದರೂ ಅಂತಿಮವಾಗಿ ಈಡಿಗರ ಅಡಿಯಲ್ಲಿಯೇ ಸೇರುತ್ತದೆ. ಶೈಕ್ಷಣಿಕ ಅಥವಾ ವೃತ್ತಿ ಜೀವನಕ್ಕೆ ಇದರಿಂದ ಯಾವುದೇ ತೊಂದರೆಯಿಲ್ಲ” ಎಂದರು.
ಸಮುದಾಯ ನಾಯಕರ ಅಭಿಪ್ರಾಯ
ಮಾಜಿ ಶಾಸಕ ಡಾ. ನಾರಾಯಣಪ್ಪ ಅವರು, “ಈಡಿಗ ಮತ್ತು ದೀವರು ಎಂಬ ಬರವಣಿಗೆಯ ಗೊಂದಲ ಬೇಡ. ಅಸ್ಥಿತ್ವ ಹಾಗೂ ಸಮುದಾಯದ ಗೌರವವನ್ನು ಉಳಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

