ಹೊಸನಗರ ; ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮೆರೆದಿವೆ. ಸರ್ಕಾರದ ವಿವಿಧ ಸವಲತ್ತುಗಳನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿತರಿಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಪ್ರಗತಿಗೆ ಪೂರಕವಾಗಿ ಸಹಕರಿಸುತ್ತಿದೆ. ಈ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ವಿನಂತಿಸಿದರು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶೈಕ್ಷಣಿಕ ಪೂರಕ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಸರ್ಕಾರಿ ಶಾಲೆಗೆ ನಿರಂತರವಾಗಿ ದಾಖಲೆ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿ ಪ್ರತಿ ವರ್ಷ ಶಾಲೆಗೆ ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಗಮನ ಸೆಳೆದಿದೆ. ಉತ್ತಮ ಶಿಕ್ಷಕ ವರ್ಗ ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರ ಕಾರ್ಯವೈಖರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿ ಆಗಿದೆ ಎಂದರು.
ಈ ವೇಳೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನೇರ್ಲೆ ರಮೇಶ, ತಹಸೀಲ್ದಾರ್ ರಶ್ಮಿ, ಮುಖ್ಯ ಶಿಕ್ಷಕ ಹರೀಶ್, ಪ್ರಮುಖರಾದ ಗೌತಮ್ ಕುಮಾರ್ ಮಂಡಾನಿ ರಮೇಶ್, ನಾಸೀರ್, ಚಿದಂಬರ್ ಮೊದಲಾದವರು ಇದ್ದರು.
ಮಂಜುನಾಥ್ ಮನೆಗೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಭೇಟಿ
ಹೊಸನಗರ ; ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಉಗ್ರರು ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿ ಮಾಡಿ ನಡೆಸಿದ ಗುಂಡಿನ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ್ದ, ಶಿವಮೊಗ್ಗ ನಗರದ ವಾಸಿ ದಿ. ಮಂಜುನಾಥ್ ರಾವ್ ನಿವಾಸಕ್ಕೆ ಶುಕ್ರವಾರ 95ರ ವಯೋವೃದ್ದ, ಹೊಸನಗರ ಕ್ಷೇತ್ರದ ಮಾಜಿ ಶಾಸಕ ಬಿ.ಸ್ವಾಮಿರಾವ್ ಭೇಟಿ ನೀಡಿ ಮೃತರ ಪುತ್ರ, ಪತ್ನಿ ಪಲ್ಲವಿ ಸೇರಿದಂತೆ ನೊಂದ ಕುಟುಂಬ ವರ್ಗಕ್ಕೆ ಆತ್ಮಸ್ಥೈರ್ಯ ತುಂಬುವ ಮೂಲಕ ಸಾಂತ್ವನ ಹೇಳಿದರು.

ಈ ವೇಳೆ ಪ್ರಮುಖರಾದ ಕೆ.ಟಿ.ತಿಮ್ಮಪ್ಪ ಮಾಜಿ ಶಾಸಕರಿಗೆ ಸಾಥ್ ನೀಡಿದರು.