ಹೊಸನಗರ : ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಹಬ್ಬ ‘ಈದುಲ್ ಅದ್ಹಾʼ ಅಥವಾ ಪವಿತ್ರ ಬಕ್ರೀದ್, ಪ್ರವಾದಿ ಇಬ್ರಾಹಿಂರ ತ್ಯಾಗ ಮತ್ತು ಬಲಿದಾನದ ಸ್ಮರಣೆಯಾಗಿ ಭಾರತದಲ್ಲಿ ಸಡಗರ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದು ಕಳೂರು ಜುಮ್ಮಾ ಮಸೀದಿ ಖತೀಬ್ ಮುಹಮ್ಮದ್ ರಿಹಾನ್ ಹೇಳಿದರು.

ಹೊಸನಗರದ ಜಾಮಿಯಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಲಾದ ವಿಶೇಷ ನಮಾಜ್ ಹಾಗೂ ಖುತ್ಬಾ ಕಾರ್ಯಕ್ರಮದಲ್ಲಿ ಮುಹಮ್ಮದ್ ರಿಹಾನ್ ಅವರು ಈ ಹಬ್ಬದ ಮಹತ್ವವನ್ನು ವಿವರಿಸಿದರು.

ಮಾನವೀಯ ಮೌಲ್ಯಗಳು ಮತ್ತು ಸಹೋದರತ್ವ ಬಲಪಡಿಸುವುದು ಬಕ್ರೀದ್ ಹಬ್ಬದ ಮುಖ್ಯ ಉದ್ದೇಶವೆಂದು ಹೋರಾಟಿಸಿದರು. ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆದೇಶದಂತೆ ತಮ್ಮ ಪ್ರೀತಿಯ ಪುತ್ರ ಹಜರತ್ ಇಸ್ಮಾಯಿಲ್ ಅವರಿಗೆ ಬಲಿ ನೀಡಲು ಸಿದ್ಧರಾದ ತ್ಯಾಗವನ್ನು ಈ ಹಬ್ಬ ಸ್ಮರಿಸುತ್ತದೆ. ಸೌದಿ ಅರೇಬಿಯಾದ ಮಕ್ಕಾದಲ್ಲಿ ನಡೆಯುವ ಪವಿತ್ರ ಹಜ್ ಯಾತ್ರೆಯ ಸಮಯದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. “ಜೀವನದಲ್ಲಿ ಕನಿಷ್ಠ ಒಂದು ಬಾರಿ ಹಜ್ ಯಾತ್ರೆ ನಿರ್ವಹಿಸುವುದು ಇಸ್ಲಾಂ ಧರ್ಮದ ಮಹತ್ವಪೂರ್ಣ ವಿಧಿ,” ಎಂದು ಅವರು ಹೇಳಿದರು.

ಹಜ್ ಯಾತ್ರೆಯ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದ ಮೂಲಕ ಪೂರ್ಣಗೊಳ್ಳುತ್ತವೆ ಮತ್ತು ಮಕ್ಕಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವ ಮಹತ್ವವನ್ನು ವಿಶೇಷವಾಗಿ ಉಲ್ಲೇಖಿಸಿದರು.

ಜಗತ್ತಿನಾದ್ಯಂತ ನೆಲೆಸಿರುವ ಮುಸ್ಲಿಂ ಬಂಧುಗಳಿಗೂ ಶಾಂತಿ, ನೆಮ್ಮದಿ ಸಿಗಲಿ ಮತ್ತು ಹಜ್ ಯಾತ್ರೆಯಲ್ಲಿ ಇರುವ ಸಮುದಾಯದ ಎಲ್ಲಾ ಸದಸ್ಯರ ಸುರಕ್ಷಿತ ಪ್ರಯಾಣ ಹಾಗೂ ಯಶಸ್ವಿ ವಾಪಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷದ ಬಕ್ರೀದ್ ಹಬ್ಬದ ಈದ್ ನಮಾಜ್ ಹಳೆ ಸಾಗರ ರಸ್ತೆಯಲ್ಲಿನ ಪೂರ್ವನಿಗದಿತ ಸ್ಥಳದಲ್ಲಿ ಮಳೆ ಕಾರಣದಿಂದ ಮಸೀದಿಯಲ್ಲಿ ನಿರ್ವಹಿಸಲಾಯಿತು.

ಆಡಳಿತ ಸಮಿತಿಯ ಬಹುತೇಕ ಎಲ್ಲಾ ಪದಾಧಿಕಾರಿಗಳು, ಜಮಾತಿನ ಸದಸ್ಯರು, ಸಮುದಾಯದ ಮುಖಂಡರು, ಯುವಕರು ಹಾಗೂ ಮಕ್ಕಳು ಪರಸ್ಪರ ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಮುದಾಯದಲ್ಲಿ ಸಹೋದರತ್ವದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





