ರಿಪ್ಪನ್ಪೇಟೆ ; ಜೈನ ಧರ್ಮದ 24 ತೀರ್ಥಂಕರರ ಪುರಾಣಗಳಲ್ಲಿ ದೇವರ ಧ್ಯಾನ, ಸ್ತುತಿ, ಪೂಜಾ ಕೈಂಕರ್ಯಗಳ ಉಲ್ಲೇಖವಿದೆ. ಆದರೆ 23ನೇ ತೀರ್ಥಂಕರರಾಗಿರುವ ಶ್ರೀ 1008 ಪಾರ್ಶ್ವನಾಥ ಸ್ವಾಮಿಯವರ ಆರಾಧನೆಯಿಂದ ಜೀವನದ ವಿಘ್ನಗಳು, ಸಂಕಷ್ಟಗಳು ಪರಿಹಾರಗೊಳ್ಳುವುದು ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಜ. 25ರ ಶನಿವಾರದಂದು ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮಕಲ್ಯಾಣ ಪರ್ವ ನಿಮಿತ್ತ ಪ್ರವಚನದಲ್ಲಿ ತಿಳಿಸಿದರು.
ತಪಃ ಕಲ್ಯಾಣದ ಬಗ್ಗೆಯೂ ವಿವರಿಸುತ್ತಾ, ಭಕ್ತರ ಆಶಯಗಳಿಗೆ ನಿತ್ಯ ಧ್ಯಾನ, ಪೂಜೆ, ಜಿನಭಕ್ತಿ ಸ್ತುತಿಗಳು ಸತ್ಫಲ ನೀಡುವುದು ನಿಶ್ಚಿತ” ಎಂದು ಹರಸಿ, ಆಶೀರ್ವದಿಸಿದರು.
ಶ್ರೀ ಚಂದ್ರಪ್ರಭ ತೀರ್ಥಂಕರರ ತಪಃ ಕಲ್ಯಾಣ ಸುದಿನವೂ ಆಗಿರುವುದರಿಂದ ಶ್ರೀ ಚಂದ್ರಪ್ರಭ ತೀರ್ಥಂಕರರ ಉಪದೇಶಗಳನ್ನು ಶ್ರೀಗಳವರು ಪ್ರವಚನದಲ್ಲಿ ಮನನ ಮಾಡಿದರು.

ಶ್ರೀ 1008 ಪಾರ್ಶ್ವನಾಥ ಸ್ವಾಮಿ ಜಿನಮಂದಿರದಲ್ಲಿ ವಿಶೇಷ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಜಿನಾಗಮೋಕ್ತ ವಿಧಿ ಜರುಗಿತು. ಪಲ್ಲಕ್ಕಿ ಉತ್ಸವ, ನಾಮಕರಣ ತೊಟ್ಟಿಲು ಸೇವೆ ನಡೆಯಿತು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಹಾಗೂ ಶ್ರೀಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಶ್ರೀಗಳವರ ಸಾನಿಧ್ಯದಲ್ಲಿ ನಿತ್ಯಪೂಜೆ ಸಲ್ಲಿಸಲಾಯಿತು.
ಶ್ರೀಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಹುಂಚ ಶ್ರೀ ಪದ್ಮಾವತಿ ಮಹಿಳಾ ಮಂಡಳ ಶ್ರಾವಿಕೆಯರು, ರಾಜ್ಯ ಹಾಗೂ ಊರ ಪರವೂರ ಭಕ್ತರು ಶ್ರೀ ಪಾರ್ಶ್ವನಾಥ ಸ್ತೋತ್ರ ಪಠಿಸಿದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.