ಹೊಸನಗರ : ಗೃಹಬಳಕೆ ವಿದ್ಯುತ್ ಬಳಕೆದಾರರ ಮನೆಗಳಿಗೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಗೃಹ ಬಳಕೆಗೆ ಮಾತ್ರ ವಿದ್ಯುತ್ ಬಳಸುತ್ತಿದ್ದರೆಯೇ ಎಂಬುವುದನ್ನು ಖಚಿತಪಡಿಸಿಕೊಂಡು ಗೃಹಜ್ಯೋತಿ ಫಾರಂ ಭರ್ತಿ ಮಾಡಲಾಗುವುದು ಎಂದು ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ಹೆಚ್.ಬಿ. ಚಿದಂಬರ ಹೇಳಿದರು.
ಹೊಸನಗರದ ಮೆಸ್ಕಾಂ ಸಹಾಯಕ ಇಂಜಿನೀಯರ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದು ಅದರ ಉಪಯೋಗವನ್ನು ರಾಜ್ಯದ ಜನತೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಪಾರದರ್ಶಕತೆಗಾಗಿ ಮೆಸ್ಕಾಂ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೆಲವರು ಗ್ಯಾರಂಟಿ ಯೋಜನೆ ರದ್ದುಪಡಿಸಲು ಹೂನ್ನಾರ ನಡೆಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಗೃಹ ಬಳಕೆಯ ಫಲಾನುಭವಿಗಳಲ್ಲಿ ಗೊಂದಲ ಮೂಡಿಸುವ ಸಲುವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹೊಸನಗರ ತಾಲ್ಲೂಕಿನ ಎಲ್ಲಾ ಫಲಾನುಭವಿಗಳಿಗೂ ಗೃಹಜ್ಯೋತಿ ಬಳಕೆಯ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಯಾರು ಗೊಂದಲಪಡುವುದು ಬೇಡ ಎಂದರು.
ರಾಜ್ಯದಲ್ಲಿ ಹಾಗೂ ತಾಲ್ಲೂಕಿನಲ್ಲಿ ಗೃಹ ಜ್ಯೋತಿ ಯೋಜನೆ ಎಂದಿನಂತೆ ಮುಂದುವರೆಯಲಿದ್ದು ಯೋಜನೆಯ ದುರುಪಯೋಗವನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದ್ದು ಮೆಸ್ಕಾಂ ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ನೀವು ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಚುನಾವಣೆ ಗುರುತಿನ ಚೀಟಿ ಜೊತೆಗೆ ವಿದ್ಯುತ್ ಬಿಲ್ ನೀಡಿ ಎಂದರು.
ಮೆಸ್ಕಾಂ ಅಧಿಕಾರಿಗಳು ಒಂದೇ ಕಡೆ ಸಭೆ ನಡೆಸುವಂತಿಲ್ಲ:
ಕೆಲವು ಮೆಸ್ಕಾಂ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ದಾಖಲೆಗಳನ್ನು ನೀಡುವಂತೆ ತಿಳಿಸುವುದಾಗಿ ದೂರು ಬಂದಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಸರ್ಕಾರದ ಆದೇಶದಂತೆ ಮನೆ-ಮನೆಗೆ ತೆರಳಿ ಪರಿಷ್ಕರಣೆ ಕಾರ್ಯ ನಡೆಸುವುವಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ. ಆದ್ದರಿಂದ ಫಲಾನುಭವಿಗಳು ಗೊಂದಲಕ್ಕೀಡಾಗದೇ ಪರಿಷ್ಕರಣೆಗೆ ಬೇಕಾದ ಅಗತ್ಯ ದಾಖಲೆಗಳನ್ನು ನೀಡಿ ಅಧಿಕಾರಿಗಳಿಗೆ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ಗ್ಯಾರಂಟಿ ಯೋಜನೆ ಬೇಡದವರು ತಿಳಿಸಿ:
ಹೊಸನಗರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಬೇಡ ಎನ್ನುವವರು ಬರೀ ಬಾಯಿ ಮಾತಿನಲ್ಲಿ ಅಲ್ಲಿ-ಇಲ್ಲಿ ಹೇಳಿಕೊಂಡು ಓಡಾಟ ನಡೆಸುವ ಬದಲು ನಮಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಬೇಡ ಎಂದು ಅರ್ಜಿ ಸಲ್ಲಿಸದರೆ ಯೋಜನೆ ತನ್ನಷ್ಟಕ್ಕೆ ತಾನೇ ನಿಲ್ಲಿಸಬಹುದು ಹಾಗೂ ಅಧಿಕಾರಿಗಳು ಅಂತವರ ಮನೆಗೆ ಭೇಟಿ ನೀಡಿದಾಗ ಬೇಡ ಎಂದರೆ ದಾಖಲೆಗಳನ್ನು ಕೊಡದಿದ್ದರೆ ಗ್ಯಾರಂಟಿ ಯೋಜನೆಯಿಂದ ಮುಕ್ತಿ ಪಡೆಯಬಹುದು ಎಂದರು.
ತಾಲ್ಲೂಕಿನಲ್ಲಿ 30% ಗೃಹಜ್ಯೋತಿ ಪರಿಷ್ಕರಣೆ ಮುಗಿದಿದೆ:
ಹೊಸನಗರ ತಾಲ್ಲೂಕಿನಲ್ಲಿ 35,551 ಜನರು ಗೃಹ ಬಳಕೆಗೆ ಗುರುತಿಸಲಾಗಿದ್ದು ಅದರಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಹಾಗೂ ಕೆಲವು ಶಾಲೆಗಳು ಸೇರಿದಂತೆ 2,969 ಗೃಹ ಬಳಕೆದಾರರು ಗೃಹಜ್ಯೋತಿ ಗ್ಯಾರಂಟಿಯಿಂದ ಹೊರಗೆ ಉಳಿದಿದ್ದಾರೆ. ಸರ್ಕಾರದ ಪರಿಷ್ಕರಣೆಯಲ್ಲಿ ಹೊಸನಗರ ತಾಲ್ಲೂಕಿನಲ್ಲಿ 30% ಪರಿಷ್ಕರಣೆ ಮುಗಿದಿದೆ ಇನ್ನೂ ಬಹಳಷ್ಟು ಕಾಲಾವಕಾಶ ಇರುವುದರಿಂದ ಫಲಾನುಭವಿಗಳು ಯಾವುದೇ ಗೊಂದಲವಿಲ್ಲದೆ ಗ್ಯಾರಂಟಿ ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದರು.

ವಾಣಿಜ್ಯ ಬಳಕೆಗೆ ಬಳಸಿದರೆ ದಂಡ:
ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿರುವುದು ಮನೆ-ಮನೆಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ. ಆದರೆ ಕೆಲವರು ವಾಣಿಜ್ಯ ಮಳಿಗೆಗಳಿಗೆ ಉಪಯೋಗಿಸುತ್ತಿದ್ದಾರೆ ಎಂದು ದೂರುಗಳು ಬರುತ್ತಿದ್ದು ತಕ್ಷಣ ಇಂತವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ದಂಡ ವಿಧಿಸಲಾಗುವುದು ಎಂದರು.
ಬಾಡಿಗೆಗೆ ಕರಾರು ಪ್ರಮಾಣಪತ್ರದ ಅಗತ್ಯವಿಲ್ಲ :
ಕೆಲವರು ಬಾಡಿಗೆ ಮನೆಯಲ್ಲಿದ್ದರು ಮನೆಯ ಮಾಲೀಕರಿಂದ ಕರಾರು ಪ್ರಮಾಣಪತ್ರ ನೀಡಬೇಕು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಬಾಡಿಗೆ ಮನೆಯಲ್ಲಿರುವವರು ಗೃಹಬಳಕೆ ವಿದ್ಯುತ್ಗೆ ಗ್ಯಾರಂಟಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವವರು ಬಾಡಿಗೆ ಮನೆಯ ಮಾಲೀಕರಿಂದ ಒಪ್ಪಂದ ಪತ್ರದ ಅಗತ್ಯವಿಲ್ಲ. ಬಾಡಿಗೆದಾರರು ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಗುರುತಿನ ಚೀಟಿ ನೀಡಿದರೆ ಸಾಕು ಎಂದು ಗ್ಯಾರಂಟಿ ಯೋಜನೆಯ ಸದಸ್ಯ ಅಮೀರ್ ಹಮ್ಜಾ ಹೇಳಿದರು.
ಪತ್ರಿಕಾಘೋಷ್ಠಿಯಲ್ಲಿ ಹೊಸನಗರ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಸಹಾಯಕ ಇಂಜಿನಿಯರ್, ಮಾಯಣ್ಣ, ಸಹಾಯಕ ಇಂಜಿನಿಯರ್ ಸಂತೃಪ್ತಿ, ಪರಶುರಾಮ್, ಕಾಂಗ್ರೆಸ್ ಮುಖಂಡ ಲೋಕೇಶ್, ನಾಗರಾಜ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





