ಜೆಜೆಎಂ ಯೋಜನೆಗೆ ಶಾಸಕ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ | ಹೊಸನಗರ ದುರ್ಗಾಂಬ ದೇವಸ್ಥಾನದಲ್ಲಿ ಷಷ್ಠಿ ದೀಪೋತ್ಸವ | ಆಂಬುಲೆನ್ಸ್ ಲೋಕಾರ್ಪಣೆ

Written by malnadtimes.com

Published on:

HOSANAGARA ; ದೇಶದ ಪ್ರತಿ ಗ್ರಾಮದ ಮನೆಗೂ ಶುದ್ದ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಸರಬರಾಜು ಮಾಡುವ ಕೇಂದ್ರ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮೀಷನಿನ (ಜೆಜೆಎಂ) 45 ಲಕ್ಷ ರೂ. ಅನುದಾನದ ಕಾಮಗಾರಿಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ತಾಲೂಕಿನ ಸುಳಗೋಡು ಗ್ರಾಮದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. 

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಬಂಕ್ರಿಬೀಡು ಮಂಜುನಾಥ್, ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್ ಸೇರಿದಂತೆ ಹಲವು ಗ್ರಾಮದ ಪ್ರಮುಖರು ಹಾಜರಿದ್ದರು.


ಡಿ.7 ರಂದು ಹೊಸನಗರದ ದುರ್ಗಾಂಬ ದೇವಸ್ಥಾನದಲ್ಲಿ ಷಷ್ಠಿ ದೀಪೋತ್ಸವ

HOSANAGARA ; ಇಲ್ಲಿನ ದ್ಯಾವರ್ಸದಲ್ಲಿರುವ ಶ್ರೀ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಶನಿವಾರ ಷಷ್ಠಿ ದೀಪೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷ ಶ್ರೀಪತಿರಾವ್‌ ತಿಳಿಸಿದರು.

ಡಿಸೆಂಬರ್ 7ರಂದು ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಸಹ ದುರ್ಗಾದೇವಿಗೆ ದೀಪೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿದ್ದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಕಾರ್ಯಕ್ರಮ ನಂತರ ದುರ್ಗಾಮ್ಮ ದೇವರಿಗೆ ಪೂಜಾ ಕಾರ್ಯಕ್ರಮ ನಡೆಯಲಿದ್ದು ಸಂಜೆ 6 ಗಂಟೆಗೆ ದೇವಸ್ಥಾನದಿಂದ ದೇವಿಯ ಉತ್ಸವ ಹೊರಟು ಮುಖ್ಯದ್ವಾರ ಮಂಟಪದಲ್ಲಿ ವಿಶೇಷ ದೀಪಾಲಂಕಾರ ಸೇವೆ ಕಟ್ಟೆಪೂಜೆ ನೆರವೇರಿಸಿ ನಂತರ ಉತ್ಸವವು ಊರಿನ ಪ್ರಮುಖ ಬೀದಿಗಳಲ್ಲಿ ಸಾಗುವುದು ಹಾಗೂ ಗುರುತಿಸಿರುವ ಸ್ಥಳಗಳಲ್ಲಿ ಸಾರ್ವಜನಿಕರು ಹಣ್ಣು-ಕಾಯಿ ಪೂಜೆ ಸಲ್ಲಿಸಬಹುದಾಗಿದ್ದು ಸಾರ್ವಜನಿಕರು ಹಾಗೂ ದೇವರ ಭಕ್ತಾರು ಈ ಉತ್ಸವ ದೀಪೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.


ಆಂಬುಲೆನ್ಸ್ ಸೇವೆಗೆ ಬೇಳೂರು ಚಾಲನೆ

RIPPONPETE ; ಇಲ್ಲಿನ ಜುಮ್ಮಾ ಮಸೀದಿಯವರು ತುರ್ತು ಚಿಕಿತ್ಸಾ ವಾಹನವನ್ನು ಸಾರ್ವಜನಿಕ ಸೇವೆಗಾಗಿ ಮೀಸಲಿರಿಸುವ ಮೂಲಕ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ಎಲ್ಲವನ್ನು ಸರ್ಕಾರವೇ ಮಾಡಬೇಕು ಎನ್ನುವ ಬದಲು ಸಮಾಜ ಸೇವೆಗೆ ಈ ರೀತಿಯಲ್ಲಿ ಧರ್ಮ ಕ್ಷೇತ್ರದವರು ಮಾಡುವುದರಿಂದ ಇನ್ನೊಂದು ಸಮಾಜ ಸಂಘಟನೆಗಳಿಗೆ ಸಂಘ ಸಂಸ್ಥೆಯವರಿಗೆ ಪ್ರೇರಣೆಯಾಗಿ ತುರ್ತು ಸೇವೆಗೆ ಇಂತಹ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯವೆಂದರು.

ಮುಸ್ಲಿಂ ಯುವಕರು ಉದ್ಯೋಗ ಅರಸಿ ವಿದೇಶದಲ್ಲಿದ್ದರೂ ಕೂಡಾ ಸೇವೆ ಮಾಡಬೇಕು ಎಂಬ ಮನೋಭಾವನೆಯಲ್ಲಿ ತಮ್ಮ ಹುಟ್ಟುರಿನ ಮಸೀದಿಗೆ ತುರ್ತು ಚಿಕಿತ್ಸಾ ವಾಹನವನ್ನು ಕೊಡುಗೆ ನೀಡುವುದರೊಂದಿಗೆ ಬಡಜನರ ಸೇವೆಗೆ ಮುಂದಾಗಿರುವುದು ಮೆಚ್ಚುವಂತದಾಗಿದೆ ಎಂದರು.

ಈ ಸಂದರ್ಭದಲ್ಲಿ ಜುಮ್ಮಾ ಮಸೀದಿಯ ಧರ್ಮಗುರುಗಳು, ಜುಮ್ಮಾಮಸೀದಿ ಆಧ್ಯಕ್ಷ ಹಸನಬ, ಮುಖಂಡರಾದ ಆರ್.ಎ.ಚಾಬುಸಾಬ್, ಅಮ್ಮೀರ್‌ಹಂಜಾ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಆಸಿಫ್‌ಭಾಷಾ, ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಶೆಟ್ಟಿ, ಇನ್ನಿತರರು ಪಾಲ್ಗೊಂಡಿದ್ದರು.

Leave a Comment