ಹೊಂಬುಜ ; ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಭಕ್ತವೃಂದದವರ ಭಾಗವಹಿಸುವಿಕೆಯಿಂದ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಒಂಬತ್ತು ದಿವಸಗಳಲ್ಲಿ ಶರನ್ನವರಾತ್ರಿ ಪೂಜೆ, ಉತ್ಸವಗಳು ನೆರವೇರಿದವು.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1JLKYxhJPJ/
ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿನಾಗಮೋಕ್ತ ಶಾಸ್ತ್ರದನ್ವಯ ಪೂಜಾ ವಿಧಿಗಳು ಪೂರ್ವ ಪರಂಪರೆಯಂತೆ ಸಂಪನ್ನಗೊಂಡಿತು.

ಒಂಬತ್ತು ದಿನಗಳ ಪರ್ಯಂತ ನಿತ್ಯಪೂಜೆ ವಿಧಿ ಸಹಿತ ಫಲ-ಪುಷ್ಪ-ದ್ರವ್ಯ-ವಿಶೇಷ ನೈವೇದ್ಯ ಅರ್ಪಿಸುವ ಮೂಲಕ ಧಾರ್ಮಿಕ ಹಿನ್ನೆಲೆಯನ್ನು ಭಕ್ತವೃಂದದವರು ಮನನ ಮಾಡುವಂತಾಯಿತು.

ಸ್ವಸ್ತಿಶ್ರೀಗಳವರು “ನವರಾತ್ರಿ ಪರ್ವವು ಆತ್ಮೋನ್ನತಿಗಾಗಿ ದೇವರ ಧ್ಯಾನ, ಸ್ವಾದ್ಯಾಯ, ಸ್ತ್ರೋತ್ರ ಸ್ತುತಿಸುವುದು, ಸಂಗೀತ, ನಾಟ್ಯ ವಾದ್ಯಗೋಷ್ಠಿಗಳೊಂದಿಗೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಾಗ, ನವೋಲ್ಲಾಸದ ಜೀವನ ಪಥದಲ್ಲಿ ಸಾಧನೆ ಮಾಡಲು ಸಾಧ್ಯ” ಎಂದು ವಿವರಿಸುತ್ತಾ, “ಸಾಮೂಹಿಕ ಪ್ರಾರ್ಥನೆ-ಪೂಜೆಗಳಿಂದ ಕಲ್ಮಶರಹಿತ ಮನೋಭಾವವು ಚೈತನ್ಯ ನೀಡುತ್ತದೆ. ಇದು ದಿವ್ಯೌಷಧ” ಎಂದು ಭಕ್ತರನ್ನು ಹರಸಿ, ಶ್ರೀಫಲ ಮಂತ್ರಾಕ್ಷತೆ ನೀಡಿದರು.

ಪ್ರಾತಃಕಾಲ ಕುಮುದ್ವತಿ ತೀರ್ಥದಿಂದ ಅಗ್ರೋದಕ ತರಲಾಯಿತು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ಧಾರ್ಮಿಕ ವಿಧಿಗಳು ಜರುಗಿದವು. ತ್ರಿಕೂಟ ಜಿನಾಲಯ, ಬೋಗಾರ ಬಸದಿ, ಮಕ್ಕಳ ಬಸದಿ, ನಗರ ಜಿನಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಆಯುಧಪೂಜಾ ವಿಧಿ ;
ಶ್ರೀಕ್ಷೇತ್ರದ ಜೈನ ಮಠದ ವಾಹನ, ಶಾಲಾ ಮಕ್ಕಳ ವಾಹನ, ಕೃಷಿ ಯಂತ್ರೋಪಕರಣಗಳ ಪೂಜೆಯನ್ನು ಶ್ರೀಗಳವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು. ಶ್ರೀ ಕ್ಷೇತ್ರ ಗಜರಾಣಿ ಐಶ್ವರ್ಯ, ಅಶ್ವಗಳಾದ ಪವನ, ಮಾನವಿ, ಚೇತಕ್ ಅಶ್ವಗಳನ್ನು ಶೃಂಗರಿಸಲಾಗಿತ್ತು.




ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.