ಹೊಸನಗರ ; ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾರಣವಾಗಿವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ಸ್ತ್ರಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಸೋಮವಾರ ಇಲ್ಲಿನ ಈಡಿಗರ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಉದ್ಯೋಗ ಕೈಗೊಳ್ಳಲು ಸರಕಾರ ಮಹಿಳೆಯರಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿದೆ. ಅಕ್ಕ ಯೋಜನೆಯಡಿ ಮಹಿಳಾ ಸಂಘಗಳನ್ನು ರಚಿಸಲು ನೂತನ ಕಾರ್ಯಕ್ರಮ ಜಾರಿಗೊಂಡಿದೆ. ಕಡಿಮೆ ದರದ ಬಡ್ಡಿಯಲ್ಲಿ ಸಾಲ ಸೌಲಭ್ಯ ಲಭ್ಯವಿದೆ. ಈಗಾಗಲೇ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕತೆ ಸುಧಾರಿಸಲು ಕಾರಣವಾಗಿವೆ. ಮಹಿಳಾ ಸಂಘಟನೆಗಳು ಸದೃಢವಾಗಿದ್ದಲ್ಲಿ ಸರಕಾರದ ಯೋಜನೆಗಳು ಮಹಿಳಾ ಫಲಾನುಭವಿಗಳನ್ನು ತಲುಪಲು ಇನ್ನಷ್ಟು ಸಹಕಾರಿಯಾಗುತ್ತವೆ ಎಂದರು.
ಸಂಸ್ಥೆಯ ನಿರ್ದೇಶಕ ಫಾ.ಪಿಯುಸ್ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಅಡಿಯಲ್ಲಿ 1800 ಸಂಘಗಳು ಕಾರ್ಯನಿರ್ವಹಿಸುತ್ತಿವೆ. 2300 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರಿ ಕಲ್ಪಿಸಿದೆ. ನೊಂದ ಮಹಿಳೆಯರಿಗಾಗಿ ಸಹಾಯ ಹಸ್ತ ಚಾಚಿವೆ ಯಾವುದೇ ಮಹಿಳೆಯರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯದಲ್ಲಿ ನಮ್ಮ ಈ ಸಂಸ್ಥೆ ಅವರ ನೆರವಿಗೆ ಬರಲಿದೆ ಎಂದರು.
ಕೊಡಚಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮೇದಿನಿ ಕೆಸವಿನಮನೆ ವಿಶೇಷ ಉಪನ್ಯಾಸ ನೀಡಿದರು.

ಪೂರ್ಣಿಮಾ ಮೂರ್ತಿರಾವ್, ಶಶಿಕಲಾ ಹರೀಶ್, ಮೀನಾಕ್ಷಿ, ನಾಗಮಣಿ, ಕೆ.ಎಸ್.ಹೇಮಾ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಹಾಗೂ ಮಧುಸೂದನ್ ಮತ್ತಿತರರು ಇದ್ದರು.