ಶಿವಮೊಗ್ಗ : ಪ್ರಾಣಿಮೂಲದ ಆಹಾರಗಳ ಮೇಲಿನ ಅವಲಂಬನೆ ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿದ್ದು ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ಪ್ರಾಧ್ಯಾಪಕರು, ತಂತ್ರಜ್ಞರು ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕಲೆತು ಜಾನುವಾರು ಪೋಷಣೆಯಲ್ಲಿ ಕಂಡುಬರುವ ನೂನ್ಯತೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ “ಪಶು ಪೋಷಣೆಯ ನಿರ್ವಹಣೆಯ ಮೂಲಕ ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ವಿವಿಧ ಪಶುವೈದ್ಯಕೀಯ ಕಾರ್ಯಕರ್ತರು ಹಾಗೂ ವಿಜ್ಞಾನಿಗಳ ಪಾತ್ರ” ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ರಾಷ್ಟ್ರದ ಅಭಿವೃದ್ಧಿಗೆ ಪಶುವೈದ್ಯಕೀಯ ಕ್ಷೇತ್ರದ ಕೊಡುಗೆ ಅನನ್ಯವಾದದ್ದು, ಪಶುವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ದೂರದೃಷ್ಟಿಯಿಂದ ಕ್ಷೇತ್ರದ ಅಭಿವೃದ್ಧಿಯ ಕುರಿತು ಯೋಚಿಸಬೇಕು, ಇಂತಹಾ ಕಾರ್ಯಾಗಾರಗಳಿಂದ ಹೊರಹೊಮ್ಮುವ ಜ್ಞಾನವನ್ನು ಪಶುಪಾಲಕರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕರ್ನಾಟಕ ಪಶುವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ.ರಾಮಚಂದ್ರಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ಪಶುಸಂಗೋಪನೆಯಲ್ಲಿ ಶೇ.70-80 ರಷ್ಟು ಖರ್ಚು ಜಾನುವಾರುಗಳ ಆಹಾರ ಪೋಷಣೆಗೇ ತಗಲುತ್ತಿದ್ದು ಸುಧಾರಿತ ಹಾಗೂ ವೈಜ್ಞಾನಿಕ ಪೋಷಣಾ ಪದ್ಧತಿಗಳ ಅಳವಡಿಕೆಯ ಮೂಲಕ ಈ ವೆಚ್ಚವನ್ನು ತಗ್ಗಿಸಿ ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಪ್ರಯತ್ನಿಸಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಡೀನ್ ಪ್ರೊ. ಪ್ರಕಾಶ್ ನಡೂರ್ ಅವರು “ಪಶು ಆಹಾರ ಪೋಷಣೆಗೆ ಸಂಬಂಧಿಸಿದ ಉದ್ಯಮಗಳು ಈಗಲೂ ನಗರ ಕೇಂದ್ರಿತವಾಗಿವೆ ಹಾಗೂ ಸಾಕು ಪ್ರಾಣಿಗಳ ಪೋಷಣೆಗೆ ಪೂರಕವಾಗಿವೆ. ರಾಷ್ಟ್ರದ ಜನತೆಗೆ ಉತ್ಕೃಷ್ಟ ಆಹಾರ ಒದಗಿಸುವ ಜಾನುವಾರುಗಳ ಸುಧಾರಿತ ಆಹಾರ ತಯಾರಿಕೆಗೆ ಹೆಚ್ಚಿನ ಒತ್ತು ಸಿಗಬೇಕು, ಗ್ರಾಮೀಣ ಮಟ್ಟದಲ್ಲಿ ಪಶುಪಾಲಕರಿಗೆ ಸುಲಭ ದರದಲ್ಲಿ ಉತ್ಕೃಷ್ಟ ಪಶು ಆಹಾರ ದೊರೆಯುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ಹಿರಿಯ ಪಶು-ಪೋಷಣಾ ತಜ್ಞರಾದ ಪ್ರೊ. ಯು.ಕೃಷ್ಣಮೂರ್ತಿ, ಹೆಬ್ಬಾಳ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರೊ.ಶಿವಕುಮಾರ ಗೌಡ ಹಾಗೂ ನುರಿತ ಪಷುಪೋಷಣಾ ತಂತ್ರಜ್ಞರೂ, ಉದ್ಯಮಿಯೂ ಆದ ಡಾ.ಸಿದ್ಧರಾಮಣ್ಣ ಜಾನುವಾರು ಪೋಷಣೆಯ ವಿವಿಧ ಸಮಸ್ಯೆ-ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಿದರು.
ಪಶು ಪೋಷಣಾ ವಿಷಯ ಪರಿಣತರೂ, ನಿವೃತ್ತ ಪ್ರಾಧ್ಯಾಪಕರುಗಳೂ ಆದ ಪ್ರೊ. ಎಂ.ಎಂ.ಕೈಲಾಸ್, ಪ್ರೊ. ಮಲ್ಲಿಕಾರ್ಜುನಪ್ಪ, ಪ್ರೊ.ವೆಂಕಟರಾಮಿರೆಡ್ಡಿ, ಪ್ರೊ.ಚಂದ್ರಪಾಲ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ವಿವಿಧ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶು-ಪೋಷಣಾ ವಿಭಾಗದ ಪ್ರಾಧ್ಯಾಪಕರುಗಳು ಹಾಗೂ ಪಶು ಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಸೇರಿದಂತೆ 150ಕ್ಕೂ ಹೆಚ್ಚು ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ವಿ.ನಾಗಭೂಷಣ ಹಾಗೂ ಡಾ. ಟಿ.ತಿರುಮಲೇಶ್ ಇವರ ಮಾರ್ಗದರ್ಶನದಲ್ಲಿ ಡಾ. ಗಿರಿಧರ್ ಕೆ.ಎಸ್ ಮತ್ತು ಡಾ. ಮಂಜು ಜಿ.ಯು ಕಾರ್ಯಗಾರವನ್ನು ಸಂಘಟಿಸಿದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.