ರಿಪ್ಪನ್ಪೇಟೆ ; ಇಲ್ಲಿನ ಪೊಲೀಸ್ರಿಗಾಗಿ ಸುಮಾರು 14 ವಸತಿ ಗೃಹಗಳು ಇದ್ದರೂ ಕೂಡಾ ಎಲ್ಲಾ ಕಟ್ಟಡಗಳು ಸೋರುತ್ತಿದ್ದು ಸೋರುವ ಕಟ್ಟಡದ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಜೀವಭಯದಲ್ಲಿ ಬದುಕುವಂತಾಗಿ ಅತ್ತ ಖಾಸಗಿ ಬಾಡಿಗೆ ಮನೆಗಳಿಗೂ ಹೋಗದೆ ಇತ್ತ ವಸತಿ ಗೃಹವನ್ನು ತೊರೆಯದೆ ವಾಸ ಮಾಡುವ ಪರಿಸ್ಥಿತಿ ಪೊಲೀಸ್ ಕುಟುಂಬದವರದಾಗಿದೆ.
ರಾಜಕೀಯ ನಾಯಕರ ಗಣ್ಯರ ಮತ್ತು ಹಿಂದೂ ಮುಸ್ಲಿಂ ಗಲಾಟೆ ಗಣೇಶೋತ್ಸವ ಹಿಂದೂ ಮುಸ್ಲಿಂ ಹಬ್ಬ ಹರಿದಿನಗಳಲ್ಲಿ ತಮ್ಮ ಕುಟುಂಬವನ್ನು ಬಿಟ್ಟು ರಕ್ಷಣೆಗೋಸ್ಕರ ಮನೆ ಮಠವನ್ನು ತೊರೆದು ಹೋಗಿ ಸಾರ್ವಜನಿಕರ ಆಸ್ತಿ ಪಾಸ್ತಿ ಮತ್ತು ಶಾಂತಿ ಸುವ್ಯವಸ್ಥೆ ಕಲ್ಪಿಸುವ ಪೊಲೀಸರಿಗೆ ನೆಮ್ಮದಿಯಿಂದ ಇರಲು ಸರಿಯಾದ ಮನೆಯಿಲ್ಲದೆ ಅವರ ದಯನೀಯ ಸ್ಥಿತಿ ಹೇಳ ತೀರದಂತಾಗಿದೆ.

ಮಳೆಗಾಲ ಬಂತೆಂದರೆ ಅಂಗಡಿಯಿಂದ ಪ್ಲಾಸ್ಟಿಕ್ ಟಾರ್ಪಲ್ಗಳನ್ನು ತಂದು ಕಟ್ಟಡದ ಮೇಲ್ಚಾವಣಿಯ ಮೇಲೆ ಹಾಕಿಕೊಂಡು ಬೆಚ್ಚನೆ ಸಂಸಾರ ಮಾಡಬೇಕಾದ ಅನಿರ್ವಾಯತೆ ಎದುರಾಗಿದ್ದು ಕೆಲವರು ನಮಗೆ ವಸತಿ ಗೃಹಗಳೇ ಬೇಡ ನಾವು ಬಾಡಿಗೆ ಕಟ್ಟಡದಲ್ಲಿದ್ದು ಕರ್ತವ್ಯಕ್ಕೆ ಹಾಜರಾಗುವುದಾಗಿ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಸರಿಯಾದ ಭದ್ರತೆಯಿಲ್ಲದ ಕಟ್ಟಡದಲ್ಲಿ ವಾಸ ಮಾಡಿಕೊಂಡು ನಮ್ಮಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಮಹಿಳಾ ಸಿಬ್ಬಂದಿಗಳ ಕಥೆಯಂತು ಹೇಳದಂತಾಗಿದೆ.
ಸರಿಯಾದ ಬಾಗಿಲುಗಳಿಲ್ಲ. ಇದ್ದರೂ ಕೂಡಾ ಸರಿಯಾಗಿ ಹಾಕಲು ತೆಗೆಯಲು ಬರುವುದಿಲ್ಲ ಹಾಕಿದರೆ ತೆಗೆಯಲಾಗದು ತೆರೆದರೆ ಹಾಕಲಾಗದಂತಾಗಿರುವ ಬಾಗಿಲು ಕಿಟಕಿಗಳು. ಇನ್ನೂ ಮಳೆ ಬಂತೆಂದರೆ ಮನೆಯ ತುಂಬಾ ನೀರೋ ನೀರು ನಮ್ಮ ಈ ಗೋಳು ಯಾರ ಬಳಿ ಹೇಳಿಕೊಳ್ಳುವುದು ಎಂದು ತಮ್ಮ ಅಸಹಾಯಕತೆಯನ್ನು ಕೆಲವರು ವ್ಯಕ್ತಪಡಿಸಿದ್ದು ಹೀಗೆ.

ಒಟ್ಟಾರೆಯಾಗಿ ನಮ್ಮ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯವರಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಒಂದು ಕಡೆ ಸರಿಯಾದ ರಸ್ತೆಯಿಲ್ಲದೆ ಇರುವುದು ಇನ್ನೊಂದು ಕಡೆಯಲ್ಲಿ ರಾತ್ರಿ ಹಗಲು ಎನ್ನದೆ ಕರ್ತವ್ಯಕ್ಕೆ ಹಾಜರಾಗುವ ಪೊಲೀಸರಿಗೆ ತಮ್ಮ ಈ ರೀತಿಯ ಮನೆಯಲ್ಲಿ ಕುಟುಂಬದವರನ್ನು ಹೇಗೆ ಬಿಟ್ಟು ಹೋಗುವುದು ಎಂಬ ಚಿಂತೆ. ಈ ಮಧ್ಯೆಯಲ್ಲಿ ಮೇಲ್ಚಾವಣಿ ಮತ್ತು ಮುರಿದ ಹೋಗಿರುವ ಬಾಗಿಲು ಕಿಟಕಿಗಳಿಂದ ಮನೆ ಸಂಸಾರದ ಚಿಂತೆಯಲ್ಲಿ ನಾವು ಪೊಲೀಸ್ ಕೆಲಸಕ್ಕೆ ಏಕಾದರೂ ಬಂದೆವೋ ಎಂಬ ಜಿಜ್ಞಾಸೆಯಲ್ಲಿ ಕಾಲಕಳೆಯುವಂತಾಗಿದೆ.
ಪೊಲೀಸ್ ವಸತಿ ಗೃಹಗಳ ನಿರ್ಮಾಣ ಹಂತದಲ್ಲಿ ಮಾಧ್ಯಮಗಳಲ್ಲಿ ಸಮಗ್ರ ವರದಿ ಮಾಡುವ ಮೂಲಕ ನಿರ್ಮಿಸಲಾಗಿರುವ ಕಾಮಗಾರಿ ಹಂತದಲ್ಲಿಯೇ ಕಳಪೆ ಗುಣಮಟ್ಟದಿಂದಾಗಿ ಆ ಕಟ್ಟಡಗಳು ವಾಸಿಸಲು ಯೋಗ್ಯವಿಲ್ಲದಂತಾಗಿವೆ ಉದ್ಘಾಟನೆಗೂ ಮುನ್ನವೇ ಸೋರುತ್ತಿವೆ ಎಂದು ವರದಿ ಮಾಡಿದ್ದವು.
ಪೊಲೀಸ್ ವಸತಿ ಗೃಹಗಳು ಸಂಪೂರ್ಣವಾಗಿ ಶಿಥಿಲಗೊಂಡು ವಾಸಿಸಲು ಯೋಗ್ಯವಿಲ್ಲದಂತಾಗಿ ನಮ್ಮ ಸಿಬ್ಬಂದಿವರ್ಗ ಖಾಸಗಿ ಬಾಡಿಗೆ ಮನೆಗಳನ್ನು ಆಶ್ರಯಿಸಬಾಕಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪೊಲೀಸ್ ವಸತಿಗೃಹಗಳ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಶೀಘ್ರದಲ್ಲಿ 7 ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
– ಗುರಣ್ಣ ಎಸ್.ಹೆಬ್ಬಾಳ್, ಸಿಪಿಐ ಹೊಸನಗರ

ನಿತ್ಯ ಬಳಕೆಯ ಅಗತ್ಯ ವಸ್ತುಗಳು ಮಳೆಗಾಲದಲ್ಲಿ ಇಲ್ಲಿನ ಸೋರುವ ಕಟ್ಟಡದಲ್ಲಿ ಇಟ್ಟುಕೊಂಡು ಬಳಸುವುದೆ ಕಷ್ಟಕರವಾಗಿದೆ ಎಂದು ಹೇಳಲಾಗುತ್ತಿದ್ದು ಗೋಡೆ ಮತ್ತು ಮೇಲ್ಚಾವಣಿಯಲ್ಲಿ ನೀರು ಜಿನುಗುವ ಕಾರಣ ಬಟ್ಟೆ, ಬೀರು ಸೇರಿದಂತೆ ಇನ್ನಿತರ ಅಗತ್ಯ ದಿನಬಳಕೆಯ ವಸ್ತುಗಳನ್ನು ಭದ್ರತೆಯಿಂದ ಇಟ್ಟುಕೊಂಡು ಕಾಪಾಡಿಕೊಳ್ಳುವುದೇ ಕಷ್ಟಕರವಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.