ಹೊಂಬುಜ ; ಶರನ್ನವರಾತ್ರಿ 6ನೇ ದಿನದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಮಹಾತಾಯಿ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಹೊಂಬುಜ ಶ್ರೀ ಜೈನ ಸಂಸ್ಥಾನದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿಶೇಷ ಜಿನಾಗಮೋಕ್ತ ಪೂಜಾ ವಿಧಾನಗಳು ಭಕ್ತರ ಭಕ್ತಿಯ ಪುಷ್ಪ-ಫಲ ಸಮರ್ಪಣೆ ಮೂಲಕ ನಡೆಯಿತು.

“ಭಕ್ತರು ತ್ರಿಕರಣಪೂರ್ವಕ ಸಮರ್ಪಿಸುವ ವರ್ಣರಂಜಿತ ವಸ್ತ್ರಗಳು (ಸೀರೆ) ಅಭೀಷ್ಠವರಪ್ರದಾಯಿನಿ ಯಕ್ಷಿಶ್ರೀ ಪದ್ಮಾವತಿ ದೇವಿ ಸ್ವೀಕರಿಸಿ, ಸರ್ವ ಭಕ್ತರ ರಕ್ಷಕಿಯಾಗಿ ಹರಸಲಿ” ಎಂದು ಪರಮಪೂಜ್ಯ ಶ್ರೀಗಳವರು ಭಕ್ತರಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಷೋಡಶೋಪಚಾರ ಪೂಜಾ ವಿಧಿಯಲ್ಲಿ ಜಿನಸ್ತುತಿ ಸ್ತುತಿಸುತ್ತಾ ಭಕ್ತವೃಂದದವರು ಧನ್ಯರಾದರು.
ಶ್ರೀ ನೇಮಿನಾಥ ಸ್ವಾಮಿ ಸ್ವಾಮಿ, ಶ್ರೀ ಮಹಾವೀರರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ಭಕ್ತವೃಂದದವರು ಪೂಜಾ ವಿಧಾನಗಳಲ್ಲಿ ಪಾಲ್ಗೊಂಡರು. ತ್ರಿಕೂಟ ಜಿನಾಲಯ, ಪಂಚಬಸದಿ, ನಗರ ಜಿನಾಲಯ, ಬೋಗಾರ ಬಸದಿ, ಮಕ್ಕಳ ಬಸದಿಗಳ ದರ್ಶನ ಪಡೆದರು. ರಾತ್ರಿ ಅಷ್ಟಾವಧಾನ ಪೂರ್ವಕ ಪರಂಪರಾನುಗತ ಗದ್ಯ, ಪದ್ಯ, ಶಂಖ, ಚಕ್ರವಾದನ, ಮುಖವೀಣೆ, ವಾದ್ಯ-ನೃತ್ಯ ಸೇವೆಗಳು ಜರುಗಿದವು. ವಸತಿ, ಅನ್ನಪ್ರಸಾದ ವ್ಯವಸ್ಥೆಯನ್ನು ಶ್ರೀಮಠದ ಸೇವಾವೃಂದದವರು ಅಚ್ಚುಕಟ್ಟಾಗಿ ನಿರ್ವಹಿಸಿದದ್ದರು. ಸೇವಾಕರ್ತರಾದ ಚೆನ್ನೈನ ಶ್ರೀ ಮಹೇಶ ಸೇಠಿ ಪರಿವಾರದವರು ಜಿನವಾಣಿ ಪೂಜೆಯಲ್ಲಿ ಪಾಲ್ಗೊಂಡರು.

ಸೆ.29 ಸೋಮವಾರ-ಸರಸ್ವತಿ ಪೂಜೆ, ಸೆ. 30 ಮಂಗಳವಾರ-ಜೀವದಯಾಷ್ಟಮಿ, ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ.
ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.