ಶಿವಮೊಗ್ಗ:ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಕೋಮು ಹಿಂಸಾಚಾರ ತಡೆಯಲು ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚನೆ ಮಾಡಿರುವ ಸಂದರ್ಭದಲ್ಲಿ, ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಸಣ್ಣ ಗಲಾಟೆ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಆಶ್ರಯ ಬಡಾವಣೆಯಲ್ಲಿ ನಿನ್ನೆ (ಆ.31) ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಹಿಂದೂಗಳ ನಡುವೆಯೇ ಜಗಳ ಉಂಟಾಗಿದೆ. ಆದರೆ, ಇದನ್ನು ಹಿಂದೂ–ಮುಸ್ಲಿಂ ಗಲಾಟೆ ಎಂದು ಬಿಂಬಿಸಲು ಯತ್ನ ನಡೆದಿರುವ ಆರೋಪ ಹೊರಬಿದ್ದಿದೆ.
ಸ್ಥಳೀಯರ ಪ್ರಕಾರ, ಬಿಜೆಪಿ ಕಾರ್ಯಕರ್ತ ಶಂಕರ್ ಎಂಬಾತ ಈ ಘಟನೆಗೆ ಧಾರ್ಮಿಕ ಬಣ್ಣ ಹಚ್ಚಲು ಪ್ರಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಅವನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿಗಳ ಸಂಘವು, “ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಸಹಕಾರದಿಂದ ಬದುಕುತ್ತಿರುವ ಬಡಾವಣೆಯಲ್ಲಿ ಜಗಳ ಹಚ್ಚುವ ಯತ್ನ ಅಸಹ್ಯಕರ” ಎಂದು ಕಿಡಿಕಾರಿದ್ದು, ಶಂಕರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಆದರೆ, ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಶಂಕರ್, “ನಾನು ಯಾವುದೇ ರೀತಿಯ ಹಿಂದೂ–ಮುಸ್ಲಿಂ ಗಲಾಟೆ ಎಂದು ಹೇಳಿಲ್ಲ. ಇದು ಅಸೂಯೆಯಿಂದ ಮಾಡಲಾದ ಅಪಪ್ರಚಾರ. ಬಡಾವಣೆಯ ಅಭಿವೃದ್ಧಿಗೆ ನಾನು ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಆದರೆ ಕೆಲವು ಅಕ್ರಮ ಚಟುವಟಿಕೆಗಳನ್ನು ವಿರೋಧಿಸಿದ್ದರಿಂದ ನನ್ನ ವಿರುದ್ಧ ಸುಳ್ಳು ದೂರುಗಳು ಬಂದಿವೆ” ಎಂದು ಸ್ಪಷ್ಟಪಡಿಸಿದರು.
ಇನ್ನು ಸ್ಥಳೀಯ ನಿವಾಸಿಗಳ ಆರೋಪ ಪ್ರಕಾರ, ಕುಂಟ ದೇವರಾಜ್ ಎನ್ನುವ ವ್ಯಕ್ತಿ ಅಕ್ರಮವಾಗಿ ಅಂಗಡಿ ಆರಂಭಿಸಿದ್ದ ಹಿನ್ನೆಲೆಯಲ್ಲಿ ಈ ಕಲಹಕ್ಕೆ ಕಾರಣವಾಗಿದ್ದು, ಶಂಕರ್ ಮೇಲೆ ತಪ್ಪು ಆರೋಪಗಳನ್ನು ಹೊರಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಸಾಮಾನ್ಯ ಗಲಾಟೆಯನ್ನು ಧಾರ್ಮಿಕ ಬಣ್ಣ ಹಚ್ಚಿ ರಾಜಕೀಯೀಕರಣ ಮಾಡುವ ಪ್ರಯತ್ನ ನಡೆದಿದೆ ಎಂಬ ಚರ್ಚೆ ವ್ಯಾಪಕವಾಗಿದ್ದು, ಪೊಲೀಸ್ ಇಲಾಖೆ ಎಲ್ಲಾ ಆಂಗಲ್ನಲ್ಲಿ ತನಿಖೆ ಮುಂದುವರಿಸಿದೆ.

