ಪರಂಜ್ಯೋತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ | ವಿದ್ಯಾಭ್ಯಾಸದಿಂದ ಜ್ಞಾನಪ್ರಭೆ ಬೆಳಗಲಿ ; ಹೊಂಬುಜ ಶ್ರೀಗಳು
ರಿಪ್ಪನ್ಪೇಟೆ : ವಿದ್ಯಾಭ್ಯಾಸದ ಮೂಲಕ ಜಾಗೃತಿ ಉಂಟಾಗುತ್ತದೆ. ಶಿಸ್ತು, ಕರ್ತವ್ಯ ನಿರ್ವಹಣೆ, ಬದ್ಧತೆಯ ಜೀವನ ಯಶಸ್ಸಿಗೆ ಮೂಲವಾಗಿದೆ ಎಂದು ಹೊಂಬುಜ (Hombuja) ಅತಿಶಯ ಶ್ರೀಕ್ಷೇತ್ರ ಹೊಂಬುಜದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಮಂಗಳವಾರದಂದು ಶ್ರೀ ಹೊಂಬುಜ ಜೈನ ಮಠದ ಶ್ರೀ ಪದ್ಮಾವತಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಪರಂಜ್ಯೋತಿ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಕ್ಕಳನ್ನು ಹರಸಿದರು.
ಆರೋಗ್ಯ ಪೂರ್ಣ ಸಾಮಾಜಿಕ ಅಭಿವೃದ್ಧಿಗೆ ಬಾಲ್ಯದ ಶೈಕ್ಷಣಿಕ ಪ್ರಗತಿ ವಾಹಿನಿಯಲ್ಲಿ ಪ್ರತಿಯೋರ್ವರ ಮಕ್ಕಳ ಬೌದ್ಧಿಕ ಜ್ಞಾನಪ್ರಭೆ ಬೆಳಗಿಸಬೇಕು. ಉತ್ತಮ ಸಂಸ್ಕಾರದಿಂದ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಬಾಲಕ-ಬಾಲಕಿಯರ ತಂದೆ ತಾಯಂದಿರು, ಪೋಷಕರು. ಮಕ್ಕಳ ಭವಿಷ್ಯ ಉಜ್ವಲವಾಗಲೆಂದು” ಹರಸಿದರು.
ಶಿಕ್ಷಕಿಯರ, ಮುಖ್ಯೋಪಾಧ್ಯಾಯಿನಿ ಪದ್ಮಾವತಿಯವರು ಸಮರ್ಪಣಾ ಭಾವದಿಂದ ಶಿಕ್ಷಣ ನೀಡುತ್ತಿರುವುದನ್ನು ಅಭಿನಂದಿಸಿದರು. ಸರಕಾರದ, ಗ್ರಾಮ ಪಂಚಾಯತಿಯ ಸಹಕಾರ, ವಿದ್ಯಾಭಿಮಾನಿಗಳ ತನು ಮನ ಧನ ಸಹಾಯ ನೀಡಿರುವುದು ಸ್ವಾಗತಾರ್ಹವಾದುದು. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ಸರಸ್ವತಿ ದೇವಿ ಅಕ್ಷರ ಜ್ಞಾನದಿಂದ ಯಶಃ ಕೀರ್ತಿ ಲಭಿಸಲೆಂದು ಆಶೀರ್ವದಿಸಿದರು.
ಶಾಲಾಭಿವೃದ್ಧಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಿ. ಮಂಜಪ್ಪ, ಗ್ರಾಮಪಂಚಾಯತಿ ಸದಸ್ಯರಾದ ದೇವೇಂದ್ರ ಹೆಚ್.ಎಸ್. ಹಾಗೂ ಸಿ.ಆರ್.ಪಿ. ದೀಪಾ ಪ್ರಕಾಶ್ ಉಪಸ್ಥಿತರಿದ್ದರು. ಶಿಕ್ಷಕಿಯರು ಸ್ವಾಗತ, ವರದಿ ವಾಚನ ಧನ್ಯವಾದ, ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಗಳವರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಪುರಸ್ಕರಿಸಿದರು. ಬಳಿಕ ಮನರಂಜನಾ ಕಾರ್ಯಕ್ರಮವನ್ನು ಮಕ್ಕಳು ನಡೆಸಿಕೊಟ್ಟರು.